ಜಯಪುರ(ಬಾಳೆಹೊನ್ನೂರು): ಚಲಿಸುತ್ತಿದ್ದ ಆಟೊ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಕೊಗ್ರೆಯ ಜಾಳ್ಮಾರದ ಬಳಿ ನಡೆದಿದೆ.
ಮೇಗೂರು ಸಮೀಪದ ಸಿಡ್ಲೆಮನೆ ನಿವಾಸಿ ರತ್ನಾಕರ (46) ಮೃತಪಟ್ಟವರು. ಗಡಿಕಲ್ ಆಟೊ ನಿಲ್ದಾಣದಲ್ಲಿ ಆಟೊ ನಿಲ್ಲಿಸುತ್ತಿದ್ದ ರತ್ನಾಕರ, ಬಾಡಿಗೆ ಉದ್ದೇಶಕ್ಕಾಗಿ ಕೊಗ್ರೆಗೆ ಹೋಗಿ ವಾಪಸ್ಸು ಬರುತ್ತಿದ್ದಾಗ ಘಟನೆ ನಡೆದಿದೆ.
ಮರ ಬಿದ್ದ ಹಿನ್ನೆಲೆ ಆಟೊ ಸಂಪೂರ್ಣ ನುಜ್ಜಗುಜ್ಜಾಗಿದೆ. ಎರಡು ದಿನಗಳಿಂದ ಮಲೆನಾಡು ಭಾಗದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ– ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ಧರೆಗುರುಳುತ್ತಿವೆ.
ರತ್ನಾಕರ ಅವಿವಾಹಿತರಾಗಿದ್ದು, ಅವರ ಸಹೋದರ ಸುಧಾಕರ್ ಜಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಠಾಣಾಧಿಕಾರಿ ಅಂಬರೀಷ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.