ADVERTISEMENT

‘ಬಿಜೆಪಿಯಲ್ಲಿ ಬ್ರಾಹ್ಮಣರಿಗೆ ಸ್ಥಾನಮಾನ’

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 7:17 IST
Last Updated 8 ಜನವರಿ 2023, 7:17 IST
ಅಂಬ್ಲೂರು ರಾಮಕೃಷ್ಣ
ಅಂಬ್ಲೂರು ರಾಮಕೃಷ್ಣ   

ಶೃಂಗೇರಿ: ‘ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದು ಉಚ್ಚಾಟಿತ ಕೊಪ್ಪ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರ ಹೇಳಿಕೆ ಸತ್ಯಕ್ಕೆ ದೂರವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ರಾಹ್ಮಣ ಸಮಾಜವು ಜನಸಂಘದ ಕಾಲದಿಂದಲೂ ಬಿಜೆಪಿಗೆ ಬೆಂಬಲಿಸಿಕೊಂಡು ಬಂದಿದೆ. ಬ್ರಾಹ್ಮಣರು ಮೊದಲು ಸಮಾಜ, ಹಿಂದುತ್ವ ಹಾಗೂ ದೇಶ ಎಂದು ಹೇಳುವ ಪಕ್ಷಕ್ಕೆ ನಿರಂತರ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಗೆ ಅಧಿಕಾರ ಇರಲಿ ಅಥವಾ ಇಲ್ಲದೇ ಇರಲಿ ಬ್ರಾಹ್ಮಣ ಸಮಾಜವು ಜೊತೆಯಲ್ಲಿದ್ದು ಬದ್ಧತೆಯಿಂದ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಬ್ರಾಹ್ಮಣ ಸಮಾಜದ ಹಲವು ಮುಖಂಡರಿಗೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಸರ್ಕಾರದ ನಾಮ ನಿರ್ದೇಶನ ಸಮಿತಿಯಲ್ಲಿ ಕೂಡ ಸ್ಥಾನಮಾನ ನೀಡಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎಸ್ ರಂಗನಾಥ್‍ ಮಾತನಾಡಿ, ‘ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ ಬಂದ ಕಾಲಘಟ್ಟದಿಂದ ಇಲ್ಲಿಯ ತನಕ ಬಿಜೆಪಿ ಬ್ರಾಹ್ಮಣರಿಗೆ ಅಧಿಕಾರ ನೀಡಿದೆ. ಈ ಹಿಂದೆ ಎನ್.ಆರ್.ಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಜೆ.ಜೆ.ನಾಗರಾಜ್, ಅಕ್ರಮ-ಸಕ್ರಮ ಸಮಿತಿ ಸದಸ್ಯರಾಗಿ ಹೊಸೂರು ಮಂಜುನಾಥ್, ಕಾಫಿ ಮಂಡಳಿ ಉಪಾಧ್ಯಕ್ಷರಾಗಿ ಮಹಾಬಲರಾವ್, ಶೃಂಗೇರಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಟಿ.ಕೆ ಪರಾಶರ, ಮ್ಯಾಮ್ಕೋಸ್ ಉಪಾಧ್ಯಕ್ಷರಾಗಿ ಯಡಗೆರೆ ಸುಬ್ರಮಣ್ಯ, ಮ್ಯಾಮ್ಕೋಸ್ ನಿರ್ದೇಶಕರಾಗಿ ಸುರೇಶ್ಚಂದ್ರ, ವಿವಿಧ ಹುದ್ದೆಗಳಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಅಧಿಕಾರ ನೀಡಲಾಗಿದೆ’ ಎಂದರು.

ADVERTISEMENT

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ತಲಗಾರು, ಮುಖಂಡರಾದ ಪರಾಶರ, ನಡುತೋಟ ಸತೀಶ್, ವಿನಯ್ ಹಳಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.