ಕಡೂರು: ಕಡೂರು ಪುರಸಭೆಗೆ ಅಧ್ಯಕ್ಷ ರಾಗಿ ಜೆಡಿಎಸ್ನ ಭಂಡಾರಿ ಶ್ರೀನಿವಾಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ಬಿಜೆಪಿಯ ವಿಜಯಾ ಆಯ್ಕೆಯಾದರು.
ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪೊಲೀಸರ ಬಿಗಿ ಬಂದೋಬಸ್ತಿನೊಂದಿಗೆ ಸೋಮವಾರ ನಡೆಯಿತು. ಒಟ್ಟು 23 ಸದಸ್ಯ ಬಲದ
(ಕಾಂಗ್ರೆಸ್ - 7 ಬಿಜೆಪಿ- 6 ಜೆಡಿಎಸ್ - 6 ಮತ್ತು ಪಕ್ಷೇತರರು 4 ) ಪುರಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿಯಾಗಿ ಅಧಿಕಾರ ಹಿಡಿಯಿತು.
ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಭಂಡಾರಿ ಶ್ರೀನಿವಾಸ್ 14 ಮತ ಪಡೆದರೆ, ಕಾಂಗ್ರೆಸ್ನ ಸಯ್ಯದ್ ಯಾಸೀನ್ 7 ಮತ ಪಡೆದು ಪರಾಭವ ಗೊಂಡರು. ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ವಿಜಯಾ 14 ಮತ ಪಡೆದರೆ, ಕಾಂಗ್ರೆಸ್ನ ಜ್ಯೋತಿ 7 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಅಜ್ಜಂಪುರ ತಹಶೀಲ್ದಾರ್ ವಿಶ್ವನಾಥ ರೆಡ್ಡಿ ಕರ್ತವ್ಯ ನಿರ್ವಹಿಸಿದರು.
ಭಂಡಾರಿ ಶ್ರೀನಿವಾಸ್ ಮತ್ತು ವಿಜಯಾ ಪರವಾಗಿ ಜೆಡಿಎಸ್ನ 6, ಬಿಜೆಪಿಯ 6 ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಮತ ಚಲಾಯಿಸಿದರು. ಜೊತೆಗೆ ಶಾಸಕರ ಒಂದು ಮತ ಸೇರಿ ಒಟ್ಟು 14 ಮತಗಳು ಇವರಿಗೆ ದೊರೆ ತವು. ಇಬ್ಬರು ಪಕ್ಷೇತರರು ತಟಸ್ಥರಾಗಿ ಉಳಿದರು. ಮತ್ತೊಬ್ಬ ಪಕ್ಷೇತರ ಸದಸ್ಯ ಈರಳ್ಳಿ ರಮೇಶ್ ಗೈರಾಗಿದ್ದರು.
‘ನಮ್ಮ ನಾಯಕರಾದ ವೈ.ಎಸ್.ವಿ.ದತ್ತಾ ಅವರ ಮಾರ್ಗದರ್ಶನದಂತೆ ಶಾಸಕ ಬೆಳ್ಳಿಪ್ರಕಾಶ್ ಅವರ ಸಹಕಾರದಿಂದ ಕಡೂರು ಪುರಸಭೆಯ ಅಧ್ಯಕ್ಷನಾಗಿದ್ದೇನೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತೇವೆ’ ಎಂದು ಭಂಡಾರಿ ಶ್ರೀನಿವಾಸ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಒಡೆಯರ್ ಇದ್ದರು.
ಬದಲಾದ ರಾಜಕೀಯ: 20 ವರ್ಷಗಳ ಹಿಂದೆ ಪುರಸಭೆಯ ಚುನಾವಣೆಯಲ್ಲಿ ಭಂಡಾರಿ ಶ್ರೀನಿವಾಸ್ ಅವರು ಬೆಳ್ಳಿಪ್ರಕಾಶ್ ಅವರನ್ನು ಸೋಲಿಸಿ ಪುರಸಭೆಗೆ ಆಯ್ಕೆಯಾಗಿದ್ದರು. ನಂತರ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಇದೀಗ ಬದಲಾದ ಸಂದರ್ಭದಲ್ಲಿ ಬೆಳ್ಳಿ ಪ್ರಕಾಶ್ ಶಾಸಕರಾಗಿದ್ದಾರೆ. ಅವರ ಪಕ್ಷದ ಬೆಂಬಲದಿಂದಲೇ ಭಂಡಾರಿ ಶ್ರೀನಿವಾಸ್ ಅಧ್ಯಕ್ಷರಾಗಿರುವುದು ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.