ಹೊಸಹಳ್ಳಿ(ಬಾಳೆಹೊನ್ನೂರು): ಐದು ವರ್ಷ ಮೇಲ್ಪಟ್ಟ ಕಾಳುಮೆಣಸಿನ ಬಳ್ಳಿಯ ಬೇರುಗಳು ಪೋಷಕಾಂಶ ಪಡೆಯಲು 20 ಅಡಿಗೂ ದೂರ ಹಬ್ಬುತ್ತವೆ ಎಂದು ಕೃಷಿ ವಿಜ್ಞಾನಿ ಸುನೀಲ್ ತಮಗಲೆ ತಿಳಿಸಿದರು.
ಹೊಸಹಳ್ಳಿ ಎಚ್.ವಿ.ಸದಾಶಿವ ಅವರ ಕೃಷಿ ಕ್ಷೇತ್ರದಲ್ಲಿ ಇಂಡಿಯನ್ ಪೆಪ್ಪರ್ ಲೀಗ್(ಐಪಿಎಲ್) ಆಯೋಜಿಸಿದ್ದ ಕಾಳುಮೆಣಸು, ಕಾಫಿ ಮತ್ತು ಅಡಿಕೆ ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲೆನಾಡು ಪ್ರದೇಶ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗೆ ಸೂಕ್ತ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿಲ್ಲ. ತೋಟದಲ್ಲಿ ಬಸಿಗಾಲುವೆ ಸಮರ್ಪಕವಾಗಿದ್ದಲ್ಲಿ ರೋಗ ಸಾಧ್ಯತೆ ಕಡಿಮೆ. ವಾರ್ಷಿಕ ಕೋಟಿಗಟ್ಟಲೆ ಕಾಳುಮೆಣಸಿನ ಗಿಡಗಳನ್ನು ಕೃಷಿಕರು ನೆಡುತ್ತಿದ್ದಾರೆ. ಆದರೆ ಫಂಗಸ್, ವಿಲ್ಟ್ ರೋಗದಿಂದ ದೊಡ್ಡ ಸಂಖ್ಯೆಯಲ್ಲಿ ಗಿಡಗಳು ಸಾಯುತ್ತಿವೆ. ಐದು ವರ್ಷದೊಳಗಿನ ಗಿಡಗಳಿಗೆ ಕಾಂಪೂಸ್ಟ್ ಗೊಬ್ಬರ ಹಾಕುವುದರಿಂದ ಬಳ್ಳಿಗಳು ಬಲಿಷ್ಟವಾಗಿ ಬೆಳೆಯುತ್ತದೆ. ವಿಲ್ಟ್ ರೋಗ ಕಾಣಿಸಿಕೊಂಡ ಬಳ್ಳಿಗಳನ್ನು ಪತ್ತೆ ಹಚ್ಚಿ ಬೇರು ಸಹಿತ ಸುಟ್ಟುಹಾಕಬೇಕು ಎಂದು ಸಲಹೆ ನೀಡಿದರು.
ಐಪಿಎಲ್ ಉಪಾಧ್ಯಕ್ಷ ಚಂದ್ರಶೇಖರ್ ಹೆಗ್ಡೆ ಮಾತನಾಡಿ, ಕಾಫಿ ಗಿಡಗಳಲ್ಲಿ ಕಾಲಕಾಲಕ್ಕೆ ಪ್ರೋನಿಂಗ್ ಮಾಡಬೇಕು. ಎರಡು ಹಂತದಲ್ಲಿ ಕಾಫಿ ಕಸಿ ಮಾಡಿದಲ್ಲಿ ಒಂದೂವರೆಗ ಎಕರೆ ಪ್ರದೇಶದಲ್ಲಿ ಬೆಳೆಯುವ ಬೆಳೆಯನ್ನು ಒಂದು ಎಕರೆ ಪ್ರದೇಶದಲ್ಲಿ ಬೆಳೆಯಬಹುದು. ಕನಿಷ್ಠ ಆರು ತಿಂಗಳು ಕಳೆದ, ಸ್ವಲ್ಪ ಬೆಲ್ಲದ ವಾಸನೆ ಸೂಸುವ ಹಂತದಲ್ಲಿರುವ ಕಾಂಪೋಸ್ಟ್ ಗೊಬ್ಬರವನ್ನು ತೋಟಕ್ಕೆ ಬಳಸಬಹುದು. ಈ ಬಾರಿ ಸುರಿದ ಮಳೆಯಿಂದಾಗಿ ಬಹುತೇಕ ರೈತರ ತೋಟದಲ್ಲಿ ಕಾಳುಮೆಣಸು, ಕಾಫಿ,ಅಡಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದರು.
ಐಪಿಎಲ್ ಅಧ್ಯಕ್ಷ ಗುಡ್ಡದಬಂಗ್ಲೆಯ ಎಚ್.ವಿ.ಪ್ರದೀಪ್, ಉಪಾಧ್ಯಕ್ಷ ಕೆ.ಎಸ್.ಸತ್ಯಪ್ರಕಾಶ್, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ನಿರ್ದೇಶಕರಾದ ಪ್ರದೀಪ್ ಜಯಪುರ, ಎಸ್.ಆರ್.ಆದರ್ಶ, ಎಚ್.ಎಂ.ಚೆನ್ನಕೇಶವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.