ಪ್ರಜಾವಾಣಿ ವಾರ್ತೆ
ನರಸಿಂಹರಾಜಪುರ: ನಾಲ್ಕು ಚಕ್ರದ ವೈಯಕ್ತಿಕ ವಾಹನ ಹೊಂದಿರುವ ಬಿಪಿಎಲ್ ಮತ್ತು ಆದ್ಯತಾ ಪಡಿತರ ಚೀಟಿಗಳ ಮೇಲೆ ಕ್ರಮಕೈಗೊಳ್ಳುವ ಕುರಿತ 2021ರ ಜುಲೈ 12ರ ಸರ್ಕಾರದ ಆದೇಶದ ಅನ್ವಯ, ತಾಲ್ಲೂಕಿನಲ್ಲಿ ನೋಟಿಸ್ ನೀಡಲಾಗುತ್ತಿದೆ.
ತಾಲ್ಲೂಕಿನಲ್ಲಿ 12,345 ಬಿಪಿಎಲ್, 2,054 ಅಂತ್ಯೋದಯ ಸೇರಿದಂತೆ ಒಟ್ಟು 14,399 ಪಡಿತರ ಚೀಟಿಗಳಿವೆ. ಆದ್ಯತಾ ಪಡಿತರ ಚೀಟಿ(ಪಿಎಚ್ಎಚ್) ಪಡೆಯಲು ಸರ್ಕಾರ ಮಾನದಂಡ ನಿಗದಿಪಡಿಸಿದ್ದು, ಅನರ್ಹ ಪಡಿತರ ಚೀಟಿ ರದ್ದುಪಡಿಸಲು ಉಪನಿರ್ದೇಶಕರಿಗೆ ಸೂಚಿಸಿದೆ.4 ಚಕ್ರದ ವಾಹನ ಹೊಂದಿರುವ ಪಡಿತರ ಚೀಟಿದಾರರ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು (ಆರ್ ಟಿಓ) ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
‘ಸರ್ಕಾರದ ಆದೇಶದಂತೆ ನಾಲ್ಕು ಚಕ್ರದ ವಾಹನ ಹೊಂದಿರುವ 109 ಜನ ಬಿಪಿಎಲ್ ಕಾರ್ಡ್ದಾರರಿಗೆ ನೋಟಿಸ್ ನೀಡಲಾಗಿದೆ. ಅಕ್ರಮವಾಗಿ ಕಾರ್ಡ್ ಪಡೆದಿದಿದ್ದರೆ, ಈ ವರಗೆ ಪಡೆದ 1ಕೆಜಿ ಅಕ್ಕಿಗೆ ₹30ರಂತೆ ದಂಡ ವಿಧಿಸಲಾಗುವುದು’ ಎಂದು ತಹಶೀಲ್ದಾರ್ ವಿಶ್ವನಾಥ್ ತಿಳಿಸಿದರು.
‘ತಾವಾಗಿಯೇ ಬಿಪಿಎಲ್ ಕಾರ್ಡ್ ಒಪ್ಪಿಸಿದರೆ ಕ್ರಮ ತೆಗೆದುಕೊಳ್ಳುವುದಿಲ್ಲ. ಈಗಾಗಲೇ 5ಕ್ಕೂ ಹೆಚ್ಚು ಜನರಿಂದ ₹40ಸಾವಿರ ದಂಡ ವಸೂಲಿ ಮಾಡಲಾಗಿದೆ’ ಎಂದು ಆಹಾರ ಶಿರಸ್ತೇದಾರ ಶ್ರೀಕಾಂತ್ ತಿಳಿಸಿದರು.
‘ಗ್ರಾಮಾಂತರ ಪ್ರದೇಶದಲ್ಲಿ ವಾಹನ ಸೌಕರ್ಯದ ಕೊರತೆ ಕಾರಣ ಕೂಲಿಕಾರ್ಮಿಕರೂ ಸಾಲಪಡೆದು ಕೊಂಡು ಹಳೆ ವಾಹನ ಕೊಂಡಿರುತ್ತಾರೆ. ರೈತರು ಕೃಷಿ ಉತ್ಪನ್ನ ಸಾಗಿಸಲು, ಕೂಲಿಕಾರ್ಮಿಕರನ್ನು ಕರೆದುಕೊಂಡು ಬರಲು ಕಡಿಮೆ ಬೆಲೆಯ ವಾಹನ ಖರೀದಿಸಿರುತ್ತಾರೆ. ನೋಟಿಸ್ ನೀಡುತ್ತಿರುವುದು ಅವೈಜ್ಞಾನಿಕ ಕ್ರಮ’ ಎನ್ನುತ್ತಾರೆ ತೋಟಕೆರೆ ಗ್ರಾಮಸ್ಥ ರಘುಶೆಟ್ಟಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.