ADVERTISEMENT

ನರಸಿಂಹರಾಜಪುರ ತಾಲ್ಲೂಕು ಸಂಪೂರ್ಣ ಸ್ತಬ್ಧ

ಮಲೆನಾಡು ರೈತ ಹಿತರಕ್ಷಣಾ ಸಮಿತಿ ಕರೆನೀಡಿದ್ದ ಸ್ವಯಂಪ್ರೇರಿತ ಬಂದ್‌ ಯಶಸ್ವಿ– ಬೃಹತ್ ಪ್ರತಿಭಟನಾ ಜಾಥಾ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 4:21 IST
Last Updated 16 ಅಕ್ಟೋಬರ್ 2020, 4:21 IST
ನರಸಿಂಹರಾಜಪುರದಲ್ಲಿ ಮಲೆನಾಡು ರೈತ ಹಿತರಕ್ಷಣಾ ಸಮಿತಿ ಗುರುವಾರ ಕರೆ ನೀಡಿದ್ದ ತಾಲ್ಲೂಕು ಬಂದ್ ವೇಳೆ ಪಟ್ಟಣದಲ್ಲಿ ಕಂಡು ಬಂದ ದೃಶ್ಯ.
ನರಸಿಂಹರಾಜಪುರದಲ್ಲಿ ಮಲೆನಾಡು ರೈತ ಹಿತರಕ್ಷಣಾ ಸಮಿತಿ ಗುರುವಾರ ಕರೆ ನೀಡಿದ್ದ ತಾಲ್ಲೂಕು ಬಂದ್ ವೇಳೆ ಪಟ್ಟಣದಲ್ಲಿ ಕಂಡು ಬಂದ ದೃಶ್ಯ.   

ನರಸಿಂಹರಾಜಪುರ: ಭದ್ರಾಹುಲಿ ಯೋಜನೆ, ಬಫರ್ ಝೋನ್, ಪರಿಸರ ಸೂಕ್ಷ್ಮ ವಲಯ, ಮೀಸಲು ಅರಣ್ಯ ಪ್ರಸ್ತಾವನೆ, ಕಸ್ತೂರಿರಂಗನ್ ವರದಿ ವಿರುದ್ಧ ಹಾಗೂ ಪಾರಂಪರಿಕ ಅರಣ್ಯ ನಿವಾಸಿಗಳ ಹಕ್ಕೋತ್ತಾಯಿಸಿ ಮಲೆನಾಡು ರೈತ ಹಿತರಕ್ಷಣಾ ಸಮಿತಿ ಕರೆ ನೀಡಲಾಗಿದ್ದ ಸ್ವಯಂ ಪ್ರೇರಿತ ನರಸಿಂಹರಾಜಪುರ ತಾಲ್ಲೂಕು ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಪಟ್ಟಣದಾದ್ಯಂತ ಗುರುವಾರ ಬೆಳಿಗ್ಗೆಯಿಂದಲೇ ಅಂಗಡಿ, ಮುಂಗಟ್ಟುಗಳು, ಹೋಟೆಲ್‌ಗಳು ಸಂಪೂರ್ಣ ಬಾಗಿಲು ಮುಚ್ಚಿದ್ದವು. ಆಟೊ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಾಹನ ಸಂಚಾರ ವಿರಳವಾಗಿತ್ತು.

ಮೆಡಿಕಲ್ ಷಾಪ್, ಆಸ್ಪತ್ರೆ, ಸರ್ಕಾರಿ ಕಚೇರಿಗಳು ಮಾತ್ರ ಬಾಗಿಲು ತೆಗೆದಿದ್ದವು. ಬಂದ್‌ಗೆ ಎಲ್ಲಾ ಪಕ್ಷದವರು, ವಿವಿಧ ಸಂಘಸಂಸ್ಥೆಗಳು ಬೆಂಬಲವನ್ನು ಸೂಚಿಸಿದ್ದವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು, ನಾಗರಿಕರು ಪಟ್ಟಣದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೂ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.

ADVERTISEMENT

‘ನಮ್ಮ ಭೂಮಿ ನಮ್ಮ ಹಕ್ಕು, ಪ್ರಾಣ ಬಿಟ್ಟರೂ ಭೂಮಿ ಬಿಡುವುದಿಲ್ಲ. ಜನವಿರೋಧಿ ಯೋಜನೆ ಕೈ ಬಿಡಬೇಕು’ ಎಂದು ಘೋಷಣೆ ಕೂಗಿದರು. ನಂತರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.