ADVERTISEMENT

ಚಿಕ್ಕಮಗಳೂರು | ಭೂಕುಸಿತ: ಜಿಲ್ಲೆಯಲ್ಲಿ 163 ದುರ್ಬಲ ಪ್ರದೇಶ

ತುರ್ತು ಸಂದರ್ಭಕ್ಕೆ ಬೇಕಾಗಬಹುದಾದ 75 ಕಡೆ ಕಾಳಜಿ ಕೇಂದ್ರ 

ವಿಜಯಕುಮಾರ್ ಎಸ್.ಕೆ.
Published 29 ಜೂನ್ 2025, 6:59 IST
Last Updated 29 ಜೂನ್ 2025, 6:59 IST
ಕೊಪ್ಪ ತಾಲ್ಲೂಕಿನ ಗುಡ್ಡೆತೋಟದ ಬಳಿ ಅಪಾಯದ ಹೊಸ್ತಿಲಲ್ಲಿರುವ ಕುಟುಂಬಗಳು
ಕೊಪ್ಪ ತಾಲ್ಲೂಕಿನ ಗುಡ್ಡೆತೋಟದ ಬಳಿ ಅಪಾಯದ ಹೊಸ್ತಿಲಲ್ಲಿರುವ ಕುಟುಂಬಗಳು   

ಚಿಕ್ಕಮಗಳೂರು: ಅತಿವೃಷ್ಟಿಯಾದರೆ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಬಹುದಾದ 163 ದುರ್ಬಲ ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದೆ. 

2019ರಿಂದ ಈವರೆಗೆ ಅತಿವೃಷ್ಠಿಯಿಂದ ಉಂಟಾದ ಭೂಕುಸಿತ ಹಾಗೂ ಹಾನಿಗಳ ಆಧಾರದ ಮೇಲೆ ಈ ದುರ್ಬಲ ಪ್ರದೇಶಗಳನ್ನು ಗುರುತಿಸಿದ್ದು, ಇವುಗಳ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಮಳೆ ಜಾಸ್ತಿಯಾದರೆ ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡಲು 75 ಕಾಳಜಿ ಕೇಂದ್ರಗಳನ್ನೂ ಜಿಲ್ಲಾಡಳಿತ ಗುರುತಿಸಿದೆ. ಮಳೆ ತೀವ್ರಗೊಂಡು ತೇವಾಂಶ ಹೆಚ್ಚಾಗಿ ಮಣ್ಣು ಸಡಿಲವಾಗುವ ಲಕ್ಷಣ ಕಾಣಿಸಿದರೆ ಜನರನ್ನು ಸ್ಥಳಾಂತರ ಮಾಡಲು ಸಿದ್ಧತೆ ನಡೆಸಿದೆ. 

163 ದುರ್ಬಲ ಪ್ರದೇಶಗಳ ಪೈಕಿ ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆಯು(ಜಿಎಸ್‌ಐ) ನೀಡಿರುವ ಸಲಹೆಯಂತೆ ಜನವಸತಿ ಮತ್ತು ರಸ್ತೆಗಳು ಅಪಾಯಕ್ಕೆ ಸಿಲುಕು ಸಾಧ್ಯತೆ ಇರುವ 25 ಸ್ಥಳಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿದೆ. 

ADVERTISEMENT

ಕೊಪ್ಪ ತಾಲ್ಲೂಕಿನ ಗುಡ್ಡೇತೋಟ ಗ್ರಾಮದಲ್ಲಿ 17 ಕುಟಂಬಗಳು ಪ್ರತಿ ವರ್ಷ ಮಳೆಗಾಲದಲ್ಲೂ ಜೀವ ಪಣಕ್ಕಿಟ್ಟು ಬದುಕುತ್ತಿವೆ. ಈ ಪೈಕಿ ಅತೀ ಹೆಚ್ಚು ದುರ್ಬಲ ಪ್ರದೇಶದಲ್ಲಿರುವ 8 ಕುಟುಂಬಗಳನ್ನು ಸ್ಥಳಾಂತರ ಮಾಡಲು ಸರ್ವೆ ನಂಬರ್ 153ರಲ್ಲಿ ಜಾಗವನ್ನು ಮೀಸಲಿರಿಸಿದೆ. ಸ್ಥಳಾಂತರ ಆಗುವ ತನಕ ಮಳೆ ಸಂದರ್ಭದಲ್ಲಿ ಕುಟುಂಬಗಳನ್ನು ಬೇರೆಡೆಗೆ ಕರೆದೊಯ್ದು ಆಶ್ರಯ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಅಪಾಯದಲ್ಲಿರುವ ರಸ್ತೆಗಳ ಪೈಕಿ ಬಾಬಾಬುಡನ್‌ಗಿರಿ ರಸ್ತೆಯಲ್ಲಿ ಕವಿಕಲ್ ಗಂಡಿ ಬಳಿ ಕುಸಿದಿದ್ದ ರಸ್ತೆಯನ್ನು ತಡೆಗೋಡೆ ನಿರ್ಮಿಸಿ ಮರು ನಿರ್ಮಾಣ ಮಾಡಲಾಗಿದೆ. ₹90 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಇದನ್ನು ಹೊರತುಪಡಿಸಿ ಬೇರೆಡೆ ಭೂಕುಸಿತ ತಡೆಯುವ ಕಾಮಗಾರಿ ಆರಂಭವಾಗಿಲ್ಲ.

ಮುಳ್ಳಯ್ಯನಗಿರಿ ರಸ್ತೆಯಲ್ಲಿ ಎರಡು ಕಡೆ ರಸ್ತೆ ಕುಸಿತ ತಡೆಗೆ ₹85 ಲಕ್ಷ ಮೊತ್ತದ ಕಾಮಗಾರಿಗೆ ಅನುಮೋದನೆ ದೊರೆತಿದೆ. ಕೊಪ್ಪ ತಾಲ್ಲೂಕಿನ ಕೊಗ್ರೆ–ಕಲ್ಲುಗುಡ್ಡೆ ರಸ್ತೆಗೆ ₹40 ಲಕ್ಷ, ಹಬ್ಬಿಕಲ್ಲು ರಸ್ತೆಗೆ ₹1 ಕೋಟಿ, ಚನ್ನಕಲ್ಲು ರಸ್ತೆಗೆ ₹75 ಲಕ್ಷ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲು ಲೋಕೋಪಯೋಗಿ ಇಲಾಖೆಗೆ ಅನುಮೋದನೆಯನ್ನು ಜಿಲ್ಲಾಡಳಿತ ನೀಡಿದೆ. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ.

ಕೊಪ್ಪ ತಾಲ್ಲೂಕಿನ ನಾರ್ವೆ ಬಳಿಯ ರಸ್ತೆ ಕುಸಿತ ಸರಿಪಡಿಸಲು ₹4.80 ಕೋಟಿ ಅನುದಾನಕ್ಕೆ ಲೋಕೋಪಯೋಗಿ ಇಲಾಖೆ ಮೂಲಕವೇ ಅನುದಾನಕ್ಕೆ ಮಂಜೂರಾತಿ ದೊರೆಕಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡರೆ ಸದ್ಯಕ್ಕೆ ಅತೀ ಹೆಚ್ಚು ದುರ್ಬಲ ಪ್ರದೇಶಗಳಲ್ಲಿ ಭೂಕುಸಿತ ತಡೆಯಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಚಾರ್ಮಾಡಿ ಘಾಟಿ: ಮೂರು ಕಡೆ ಅಪಾಯ ಚಾರ್ಮಾಡಿ ಘಾಟಿಯಲ್ಲಿ ಮೂರು ಕಡೆ ಗುಡ್ಡ ಕುಸಿತದ ಸಾಧ್ಯತೆಯನ್ನು ಜಿಎಸ್‌ಐ ಗುರುತಿಸಿದ್ದು ಸರಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 163ಯಲ್ಲಿ ಶೃಂಗೇರಿ ತಾಲ್ಲೂಕಿನ ಎರಡು ಕಡೆ ರಸ್ತೆಗೆ ಗುಡ್ಡ ಕುಸಿತು ಸಾಧ್ಯತೆ ಇದ್ದು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಡಳಿತ ಮಾಹಿತಿ ನೀಡಿದೆ.

57 ನೋಡಲ್ ಅಧಿಕಾರಿಗಳ ನೇಮಕ ಭೂಕುಸಿತ ಉಂಟಾಗಬಹುದಾದ ಸ್ಥಳಗಳ ಮೇಲೆ ನಿಗಾ ವಹಿಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಬ್ಬರಂತೆ 57 ನೋಡಲ್ ಅಧಿಕಾರಿಗಳನ್ನು ಜಿಲ್ಲಾಡಳಿತ ನೇಮಿಸಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಒಟ್ಟು 164 ಸೇತುವೆಗಳ ಮತ್ತು 51 ಕಾಲು ಸಂಕಗಳ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದರು. ವಿಪತ್ತು ನಿರ್ವಹಣೆ ಸಮಯದಲ್ಲಿ ತುರ್ತು ಕಾರ್ಯಕ್ಕೆ ಬೇಕಾಗಬಹುದಾದ 48 ಜೆಸಿಬಿ 61 ಹಿಟಾಚಿ 74 ಟ್ರಾಕ್ಟರ್ ಮತ್ತು 263 ಟಿಪ್ಪರ್‌ಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದೆ. ನುರಿತ 108 ಈಜುಗಾರರನ್ನು ಮತ್ತು 330 ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ಅವರಿಗೆ ತರಬೇತಿಯನ್ನೂ ನೀಡಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.