ಚಿಕ್ಕಮಗಳೂರು: ‘ಮನುಷ್ಯನು ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ಮನಸ್ಸಿಗೆ ಬರುವ ಮೊದಲ ಹೆಸರು ವೈದ್ಯರದು. ವೈದ್ಯರನ್ನು ಭಗವಂತನ ಎರಡನೇ ಸ್ವರೂಪವೆಂದು ಹೇಳಲಾಗುವುದು’ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ತಾಲ್ಲೂಕಿನ ಹಿರೇಮಗಳೂರು ಗ್ರಾಮಸ್ಥರ ವತಿಯಿಂದ ಮಂಗಳವಾರ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ.ಮನೋಜ್ ಸಾಲ್ಡಾನ ಅವರಿಗೆ ಆರೋಗ್ಯ ಕೇಂದ್ರದಲ್ಲಿ ಗೌರವ ಸಮರ್ಪಿಸಿ ಅವರು ಮಾತನಾಡಿದರು.
ಹಗಲು-ರಾತ್ರಿ ಎನ್ನದೇ ರೋಗಿಗಳ ನಿರಂತರ ಸೇವೆಯಲ್ಲಿ ತೊಡಗುವ ವೈದ್ಯರನ್ನು ಪ್ರತಿಯೊಬ್ಬರು ಗೌರವಿಸಬೇಕು. ಜೀವನವನ್ನು ಸುಲಭಗೊಳಿಸಲು, ದೇಹವನ್ನು ಆರೋಗ್ಯವಾಗಿಡುವುದು ಅತ್ಯಂತ ಮುಖ್ಯ. ರೋಗಗಳಿಂದ ದೂರವಿದ್ದರೆ, ನೀವು ಜೀವನದ ಪ್ರತಿ ಕ್ಷಣವನ್ನು ಸಂತೋಷದಿಂದ ಬದುಕಲು ಸಾಧ್ಯವಾಗಲಿದ್ದು, ವೈದ್ಯರು ನಮ್ಮನ್ನು ರೋಗಗಳಿಂದ ದೂರವಿಡುವ ಕಾಯಕ ಮಾಡುತ್ತಿದ್ದಾರೆ ಎಂದರು.
ಗ್ರಾಮಸ್ಥ ಎಚ್.ಕೆ.ಕೇಶವಮೂರ್ತಿ ಮಾತನಾಡಿ, ವೈದ್ಯೋ ನಾರಾಯಣೋ ಹರಿಃ ಎಂಬ ನಾಣ್ನುಡಿ ಇದೆ. ಅಂದರೆ ವೈದ್ಯರು ದೇವರ ಸಮಾನ ಎಂದರ್ಥ. ಅನಾರೋಗ್ಯದ ಸಂದರ್ಭದಲ್ಲಿ ನಮ್ಮನ್ನು ಗುಣಪಡಿಸಿ, ಮರುಜೀವ ನೀಡುವ ವೈದ್ಯರು ನಿಜಕ್ಕೂ ದೇವರ ಸ್ವರೂಪಿ ಎಂದರೆ ತಪ್ಪಲಾಗುವುದಿಲ್ಲ ಎಂದು ತಿಳಿಸಿದರು.
ಗ್ರಾಮಸ್ಥರಾದ ಎಸ್.ಬಸವರಾಜ್, ಲೋಕೇಶ್, ಎಚ್.ಎಸ್.ಪುಟ್ಟಸ್ವಾಮಿ, ಎಚ್. ಜೆ.ಶಿವಕುಮಾರ್, ಎಚ್.ಎಸ್.ರವಿಕುಮಾರ್, ಎಚ್.ಎಸ್.ಧನಂಜಯ್, ಎಚ್.ಪಿ.ಶಿವಕುಮಾರ್, ಸಚಿನ್, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.