ADVERTISEMENT

15ರಂದು ಕಾಫಿ ಕೃಷಿ ಮೇಳ, ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 15:33 IST
Last Updated 10 ಜನವರಿ 2019, 15:33 IST
ಬಿ.ಎಸ್‌.ಜೈರಾಮ್‌
ಬಿ.ಎಸ್‌.ಜೈರಾಮ್‌   

ಚಿಕ್ಕಮಗಳೂರು: ಕರ್ನಾಟಕ ಬೆಳೆಗಾರರ ಒಕ್ಕೂಟದ(ಕೆಜಿಎಫ್‌) ವತಿಯಿಂದ ಇದೇ 15ರಂದು ನಗರದಲ್ಲಿ ಕಾಫಿ ಕೃಷಿ ಮೇಳ, ಕಾಫಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎಸ್‌.ಜೈರಾಮ್‌ ಇಲ್ಲಿ ಗುರುವಾರ ತಿಳಿಸಿದರು.

ವಿಜಯಪುರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಳ ಉದ್ಘಾಟಿಸುವರು. ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರು ಹಿಲ್‌ ಬ್ರಾಂಡೆಡ್‌ ಕಾಫಿಪುಡಿ ಬಿಡುಗಡೆ ಮಾಡುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಮ್ಮೇಳನ ಉದ್ಘಾಟಿಸುವರು. ಸಂಸದ ಎಚ್‌.ಡಿ.ದೇವೇಗೌಡ ಅವರು ಸ್ಮರಣಸಂಚಿಕೆ ಬಿಡುಗಡೆಗೊಳಿಸುವರು ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಅವರು ಎಸ್ಟೇಟ್‌ ಮಂಕೀಸ್‌ ಬ್ರಾಂಡ್‌ ಕಾಫಿಪುಡಿ ಬಿಡುಗಡೆ ಮಾಡುವರು. ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ರೈತಸ್ನೇಹಿ ವೆಬ್‌ಸೈಟ್‌ಗೆ ಚಾಲನೆ ನೀಡುವರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ಪ್ರಿಮೀಯರ್‌ ವಸ್ತುಪ್ರದರ್ಶನ ಉದ್ಘಾಟನೆ ನೆರವೇರಿಸುವರು. ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಪಾಲ್ಗೊಳ್ಳುವರು ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಫಿ ಉಪಉತ್ಪನ್ನಗಳಾದ ವೈನ್‌, ಹಾರಗಳನ್ನು ಬಿಡುಗಡೆಗೊಳಿಸುವರು. ಸಂಸದ ಪ್ರತಾಪಸಿಂಹ ಅವರು ವಸ್ತುಪ್ರದರ್ಶನ ಉದ್ಘಾಟಿಸುವರು. ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಬೆಳೆಗಾರರು ಪಾಲ್ಗೊಳ್ಳುವರು ಎಂದರು.

ಕಾಫಿ ಬೆಳೆಗಾರರ ಸಂಕಷ್ಟಗಳ (ಅತಿವೃಷ್ಟಿ, ಬೆಲೆ ಕುಸಿತ...) ವಸ್ತುಸ್ಥಿತಿ ಪರಿಶೀಲನೆ ನಿಟ್ಟಿನಲ್ಲಿ ಟಾಸ್ಕ್‌ ಪೋರ್ಸ್‌ (ಕಾರ್ಯಪಡೆ) ರಚಿಸಿ, ಶೀಘ್ರದಲ್ಲಿ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ. ಕಾಫಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ‍ಪಡಿಸಲು ಕ್ರಮ ಕೈಗೊಳ್ಳಬೇಕು. ಒತ್ತುವರಿ ಜಮೀನು ಭೋಗ್ಯಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ. ಇದನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಕೇರಳ ಮಾದರಿ ಅನುಸರಿಸಬೇಕು ಎಂದು ಮನವಿ ಮಾಡಿದರು.

‘ಕಾಳು ಮೆಣಸು ಆಮದಿಗೆ ಕೆಜಿಗೆ ₹ 500 ಎಂಐಪಿ (ಕನಿಷ್ಠ ಆಮದು ಶುಲ್ಕ) ವಿಧಿಸಿದ್ದರೂ, ವಂಚನೆಗೆ ಕಡಿವಾಣ ಬಿದ್ದಿಲ್ಲ. ಇದರಿಂದ, ಬೆಳೆಗಾರರಿಗೆ ಪ್ರಯೋಜನವಾಗಿಲ್ಲ. ವರ್ತಕರಿಗೆ ಅನುಕೂಲವಾಗಿದೆ. ವಿದೇಶಿ ಕಾಳುಮೆಣಸು ಪ್ರವೇಶಿಸದಂತೆ ಕಡಿವಾಣ ಹಾಕಬೇಕು’ ಎಂದು ಕೋರಿದರು.

ಕೆಜಿಎಫ್‌ ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್‌, ಸಿ.ಎಸ್‌.ಮಹೇಶ್‌, ಪುಟ್ಟೇಗೌಡ, ಮಹಮದ್‌ ಮುಜಾಯಿದ್‌, ಕೆ.ಯು.ರತೀಶ್‌, ಲಿಂಗಪ್ಪ ಗೌಡ, ಎಚ್‌.ಟಿ.ಮೋಹನಕುಮಾರ್, ಬಾಲಕೃಷ್ಣ, ಮನೋಹರ್‌, ಟಿ.ಡಿ.ಮಲ್ಲೇಶ್‌, ಕೆ.ಎಸ್‌.ನಾರಾಯಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.