
ಆಲ್ದೂರು: ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ರೋಗಗಳು, ಬೆಲೆ ಏರಿಳಿತ, ಇಳುವರಿ ಕೊರತೆ, ವನ್ಯಜೀವಿಗಳ ಕಾಟ ಮೊದಲಾದ ಸಮಸ್ಯೆಗಳ ನಡುವೆ ಬೆಳೆ ಉಳಿಸಿಕೊಳ್ಳಬೇಕಾದ ಸವಾಲು ಕಾಫಿ ಬೆಳೆಗಾರರದ್ದು.
ವಾಡಿಕೆಗಿಂತ ಹೆಚ್ಚು ಮಳೆಯಾಗಿ ತೊಂದರೆ ಅನುಭವಿಸಿದ್ದ ಕಾಫಿ ಬೆಳೆಗಾರರು ಈಗ ಬೆಳೆಯ ಕೊಯ್ಲು ಪ್ರಾರಂಭಿಸಿದ್ದಾರೆ.
ಕೃಷಿಯಲ್ಲಿ ಸುಧಾರಣೆ ತರದಿದ್ದರೆ ನಷ್ಟ ತಪ್ಪಿದ್ದಲ್ಲ. ಕಾಫಿಗೆ ಉತ್ತಮ ಬೆಲೆ ಇದ್ದರೂ, ಪ್ರಕೃತಿ ವಿಕೋಪದ ನಡುವೆ ತೋಟದ ನಿರ್ವಹಣೆ ಸುಲಭವಲ್ಲ. ಸಕಾಲಕ್ಕೆ ವೈಜ್ಞಾನಿಕ ಅಂಶಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳದಿದ್ದರೆ ಹಿನ್ನಡೆ ಖಂಡಿತ ಎನ್ನುತ್ತಾರೆ ಪ್ರಗತಿಪರ ಕೃಷಿಕ ಲಾಯ್ಡ್ ಅಮರ್ ಡಿಸೋಜ.
‘ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ. ಈ ವರ್ಷ ಅತಿವೃಷ್ಟಿಯಿಂದ ಹಲವು ಪ್ರದೇಶಗಳಲ್ಲಿ ಕಾಫಿ ಉತ್ಪಾದನೆ ಕುಂಠಿತವಾಗಿದೆ. ಜೇನುನೊಣಗಳ ಕೊರತೆಯಿಂದ ಸರಿಯಾಗಿ ಪರಾಗಸ್ಪರ್ಶವೂ ಆಗಿಲ್ಲ. ಈ ಬಾರಿ ರೊಬಸ್ಟಾ ಉತ್ಪಾದನೆ ಶೇ 25ರಷ್ಟು ಕಡಿಮೆ ಆಗಲಿದ್ದು, ಅರೇಬಿಕ ಕಾಫಿ ಶೇ 15ರಷ್ಟು ಹೆಚ್ಚಳವಾಗಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಶೇ 15ರಿಂದ 18ರಷ್ಟು ಕಾಫಿ ಉತ್ಪಾದನೆ ಕುಂಠಿತ ಆಗಲಿದೆ ಎನ್ನುವ ಮಾಹಿತಿ ಇದೆ’ ಎನ್ನುತ್ತಾರೆ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವ ವೃಂದ.
ನವೆಂಬರ್ನಿಂದ ಪ್ರಾರಂಭವಾಗುವ ಕೊಯ್ಲು ಮಾರ್ಚ್ವರೆಗೆ ನಡೆಯಲಿದೆ. ಕಾರ್ಮಿಕರ ಕೊರತೆ ನೀಗಿಸಿಕೊಳ್ಳಲು ವಲಸೆ ಕಾರ್ಮಿಕರ ಅವಲಂಬನೆ ಅನಿವಾರ್ಯ. ಆದರೆ, ಶೀಘ್ರ ಕೊಯ್ಲು ಮಾಡುವ ಭರದಲ್ಲಿ ಅತಿ ಹೆಚ್ಚು ವೇತನ ನೀಡಬಾರದು. ಸಹಕಾರ ಕ್ಷೇತ್ರದ ಮೂಲಕ ಚರ್ಚಿಸಿ ವೇತನ ನಿಗದಿ ಮಾಡಿದರೆ, ಬೆಳೆಗಾರರಿಗೂ ಹೆಚ್ಚಿನ ಹೊರೆ ಬೀಳುವುದಿಲ್ಲ ಎನ್ನುತ್ತಾರೆ ಅವರು.
ಶೇ 33ಕ್ಕಿಂತ ಹೆಚ್ಚು ಬೆಳೆ ನಷ್ಟ ಆಗಿರುವ ಪ್ರದೇಶಗಳ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಕಾಲದಲ್ಲಿ ಸಮೀಕ್ಷೆ ನಡೆದರೆ, ಬೆಳೆಗಾರರಿಗೆ ಪರಿಹಾರ ದೊರೆತು ಅನುಕೂಲವಾಗುತ್ತದೆ. ಗುಣಮಟ್ಟದ ಕಾಫಿ ಉತ್ಪಾದನೆ, ಸಮಂಜಸ ಬೆಲೆ ಇರುವಾಗ ಮಾರಾಟ ಮಾಡುವುದು ಸುರಕ್ಷಿತ ನಡೆ ಎಂದು ಸಲಹೆ ನೀಡಿದ್ದಾರೆ.
ಭಾರತದ ರೋಬಸ್ಟಾ ಕಾಫಿ ತಳಿಗೆ ಯುರೋಪಿನಲ್ಲಿ ಉತ್ತಮ ಬೇಡಿಕೆ ಇದೆ. ಕಾಫಿಯ ಸರಾಸರಿ ಉತ್ಪಾದನೆ ಪ್ರಮಾಣ ಕಡಿಮೆಯಾಗಿಲ್ಲ.ಎಂ.ಜೆ. ದಿನೇಶ್ ದೇವ ವೃಂದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.