ADVERTISEMENT

2 ತಿಂಗಳು ಕುಟುಂಬದಿಂದ ದೂರ

ಬೀರೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಕೆ.ವಿ.ರಾಜಶೇಖರ್

ಎನ್‌.ಸೋಮಶೇಖರ
Published 29 ಜೂನ್ 2020, 15:18 IST
Last Updated 29 ಜೂನ್ 2020, 15:18 IST
ಕೆ.ವಿ.ರಾಜಶೇಖರ್
ಕೆ.ವಿ.ರಾಜಶೇಖರ್   

ಬೀರೂರು: ‘ನಾನೂ ಸೇರಿದಂತೆ ಹಲವು ಪೊಲೀಸ್‌ ಸಿಬ್ಬಂದಿಯ ಮನೆಯಲ್ಲಿ ಸಣ್ಣ ಮಕ್ಕಳು, ವೃದ್ಧರು ಇದ್ದಾರೆ. ಮೊದ ಮೊದಲು ಕೆಲಸ ಮುಗಿಸಿ ಮನೆಗೆ ಹೋದ ತಕ್ಷಣ ಅಪ್ಪಿಕೊಳ್ಳಲು ಧಾವಿಸಿ ಬರುತ್ತಿದ್ದ ಮಕ್ಕಳನ್ನು ನಿಯಂತ್ರಿ ಸುವುದು ಕಷ್ಟಕರವಾಗಿತ್ತು. ಹೀಗಾಗಿ, ಕೆಲವು ಸಿಬ್ಬಂದಿ ಮನೆಯ ಸದಸ್ಯರನ್ನು ಪರಸ್ಥಳಗಳಿಗೆ ಕಳುಹಿಸಿದ ಉದಾಹರಣೆ ಗಳಿವೆ’ ಎನ್ನುತ್ತಾರೆ ಬೀರೂರು ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಕೆ.ವಿ.ರಾಜಶೇಖರ್.

ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆ ಅನುಪಮವಾದುದು. ಲಾಕ್‍ಡೌನ್ ಸಮರ್ಪಕ ಅನುಷ್ಠಾನ, ರೋಗಿಗಳನ್ನು ಕ್ವಾರಂಟೈನ್‍ಗೆ ಕಳುಹಿಸಲು ವ್ಯವಸ್ಥೆ, ಸೀಲ್‍ಡೌನ್ ಪ್ರದೇಶಗಳಲ್ಲಿ ಜನರ ಕುಂದು-ಕೊರತೆಗೆ ಸ್ಪಂದಿಸುವ ಕಾರ್ಯ ಮಾಡುತ್ತಿರುವ ಕೆ.ವಿ.ರಾಜಶೇಖರ್ ಅವರು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ್ದು ಹೀಗೆ.

‘ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟ ಯುದ್ಧದಂತೆ ಇತ್ತು. ಈ ಸೋಂಕಿನ ಪರಿಣಾಮದ ಅರಿವಿರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಅನಗತ್ಯವಾಗಿ ಓಡಾಡದಂತೆ ನಿರ್ಬಂಧಿಸುವುದು ಪ್ರಯಾಸವೇ ಹೌದು. ಆದರೆ, ಇಲಾಖೆ ವತಿಯಿಂದ ಮಾಡಲಾದ ಜಾಗೃತಿ ಮೂಡಿಸುವ ಕಾರ್ಯಗಳು ಕ್ರಮೇಣ ಜನರನ್ನು ತಹಬಂದಿಗೆ ತರುವಲ್ಲಿ ನೆರವಾದವು

ADVERTISEMENT

‘ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸುವುದು, ವ್ಯಾಪ್ತಿಯ ಹಳ್ಳಿಗಳು, ಬಡಾವಣೆಗಳಲ್ಲಿ ತಳ್ಳುಗಾಡಿ, ಗೂಡ್ಸ್ ಆಟೊ ಮೂಲಕ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಇಲ್ಲಿನ ಮೆಡಿಕಲ್ ಅಂಗಡಿಗಳಲ್ಲಿ ದೊರೆಯದ ಔಷಧಗಳನ್ನು ಪರಸ್ಥಳದಿಂದ ಕಡಿಮೆ ಅವಧಿಯಲ್ಲಿ ತರಿಸಿಕೊಡಲು ಸಹಾಯವಾಣಿ ಸ್ಥಾಪಿಸಿದ್ದು, ನಾಗರಿಕರು ಅನಿವಾರ್ಯ ಸಂದರ್ಭದಲ್ಲಿ ಪರಸ್ಥಳ ಗಳಿಗೆ ತೆರಳಲು ಸೇವಾಸಿಂಧು ಮೂಲಕ ಪಾಸ್ ಪಡೆಯಲು ನೋಡಲ್ ಆಫೀಸರ್ ನೇಮಿಸಿದ್ದು... ಹೀಗೆ ಹಲವಾರು ಕ್ರಮಗಳನ್ನು ವಹಿಸುವ ಜತೆಗೆ ನಿರಂತರ ಗಸ್ತು, ಕ್ವಾರಂಟೈನ್ ಕೇಂದ್ರಗಳ ಪರಿಶೀಲನೆ ಮೊದಲಾದ ಜವಾಬ್ದಾರಿ ಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಿರ್ವಹಿಸಲಾಗಿದೆ.

ಬಹುತೇಕ ಪೊಲೀಸರು 2 ತಿಂಗಳು ಕುಟುಂಬ ಸದಸ್ಯರಿಂದ ದೂರವಿದ್ದೆವು. ನಮ್ಮ ಸಿಬ್ಬಂದಿ 2 ತಿಂಗಳ ಕಾಲ ರಜೆ ಸೌಲಭ್ಯ ಪಡೆಯದೆ ಹಗಲಿರುಳೂ ಅವಿರತ ಶ್ರಮಿಸಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಮೊದಲಾದ ಪರಿಕರಗಳನ್ನು ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಿಂದ ನಾಲ್ಕು ಬಾರಿ ಪೂರೈಸಲಾಗಿತ್ತು. ಮತಿಘಟ್ಟ ಚೆಕ್‍ಪೋಸ್ಟ್‌ನಲ್ಲಿ ತಪಾಸಣೆ ನಡೆಸುವ ಸಂದರ್ಭ ಸೋಂಕಿತರ ಸಂಪರ್ಕಕ್ಕೆ ಬಂದ ಪರಿಣಾಮ ನಾನು ಕೂಡಾ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಬೇಕಾಯಿತು.

ಕೊರೊನಾ ಅವಧಿಯಲ್ಲಿ ಪೊಲೀಸ್ ಮತ್ತು ನಾಗರಿಕರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದೆ. ಆದರೆ ಜನರ ಮನಸ್ಥಿತಿ ಇನ್ನೂ ಬದಲಾಗಬೇಕಿ ರುವುದು ಕೂಡಾ ಕಂಡುಬಂದಿದೆ. ಸೋಂಕಿತರನ್ನು ಅಕ್ಕಪಕ್ಕದ ಜನ ಅಪ ರಾಧಿಗಳಂತೆ ಕಾಣುವುದು ಸರಿಯಲ್ಲ. ಅನಿರೀಕ್ಷಿತ ಬಾಧೆಗೆ ಒಳಗಾದವರನ್ನು ಅಪಮಾನ ಮಾಡುವುದು ಬಿಟ್ಟು, ಅವರನ್ನು ಸಹಾನುಭೂತಿಯಿಂದ ಕಾಣಬೇಕಿರುವುದು ನಮ್ಮ ಧರ್ಮ’ ಎಂದು ಹೇಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.