ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶನಿವಾರ ವೈದ್ಯ ಸಹಿತ ಮೂವರಿಗೆ ಕೋವಿಡ್–19 ದೃಢಪಟ್ಟಿದೆ, ಏಳು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 37ಕ್ಕೆ ಇಳಿದಿದೆ.
ಬೆಂಗಳೂರಿನಿಂದ ನಗರಕ್ಕೆ ವಾಪಸಾಗಿದ್ದ ಖಾಸಗಿ ಆಸ್ಪತ್ರೆಯ 29 ವರ್ಷದ ವೈದ್ಯ (ಪಿ–19749), ತಾಲ್ಲೂಕಿನ ಕಳಾಸಪುರ ಬಳಿ ರಾಮ ದೇವರಹಳ್ಳಿಗೆ ಬಂದಿದ್ದ 56 ವರ್ಷದ ಪುರುಷ (ಪಿ–19750) ಹಾಗೂ ಅಜ್ಜಂಪುರ ತಾಲ್ಲೂಕಿನ ಚೌಳಹಿರಿ ಯೂರಿನ ಕೆಎಸ್ಆರ್ಟಿಸಿ ನೌಕರ 42 ವರ್ಷದ ಪುರುಷಗೆ (ಪಿ–197501) ಸೋಂಕು ಪತ್ತೆಯಾಗಿದೆ. ಮೂವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ.
179 ಮಂದಿ ಗಂಟಲು ದ್ರವ ಪರೀಕ್ಷೆಗೆ ರವಾನೆ: ಕೊರೊನಾ ವೈರಾಣು ಸೋಂಕು ಪತ್ತೆ ನಿಟ್ಟಿನಲ್ಲಿ 179 ಮಂದಿಯ ಗಂಟಲು ಮತ್ತು ಮೂಗಿನ ದ್ರವ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಶನಿವಾರ ರವಾನಿಸಲಾಗಿದೆ.
30ಮಂದಿಯ ಗಂಟಲ ದ್ರವ ಮತ್ತು ಮೂಗಿನ ದ್ರವ ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ಪತ್ತೆಯಾಗಿಲ್ಲ. 2098 ಮಂದಿಯ ಮಾದರಿ ಪರೀಕ್ಷೆ ವರದಿ ಬರಬೇಕಿದೆ. 175ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕೆ.ಮಂಜುನಾಥ್ ತಿಳಿಸಿದ್ದಾರೆ.
ಅನ್ನಪೂರ್ಣ ಆಸ್ಪತ್ರೆ ನಿರ್ಬಂಧಿತ ವಲಯ: ಕೆ.ಎಂ.ರಸ್ತೆಯ (ಬೋಳರಾಮೇಶ್ವರ ದೇಗುಲ ಸಮೀಪ) ಅನ್ನಪೂರ್ಣ ಆಸ್ಪತ್ರೆಗೆ ಸಂಬಂಧಿಸಿದ ವೈದ್ಯರೊಬ್ಬರಿಗೆ ಕೋವಿಡ್ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನು ನಿರ್ಬಂಧಿತ ವಲಯವಾಗಿ ಘೋಷಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.