ಕೊಪ್ಪ: ತಾಲ್ಲೂಕಿನ ಕ್ವರ್ಡಿಹಿತ್ಲು ನಿವಾಸಿ, ಸಿಂಡಿಕೇಟ್ ಬ್ಯಾಂಕಿನ ಚಿಕ್ಕ ಮಗಳೂರು ವಿಭಾಗೀಯ ಕಚೇರಿಯ ಹಿರಿಯ ವ್ಯವಸ್ಥಾಪಕ ಉಮೇಶ್(39) ಕೋವಿಡ್ ಸೋಂಕಿನಿಂದ ಶನಿವಾರ ಮೃತಪಟ್ಟರು. ಅವರಿಗೆ ಪತ್ನಿ ಹಾಗೂ ಐದು ವರ್ಷದ ಪುತ್ರ ಇದ್ದಾರೆ.
ತಮಿಳುನಾಡಿನವರಾದ ಉಮೇಶ್ ಕುಟುಂಬ ಹಲವು ದಶಕಗಳ ಹಿಂದೆ ಕೆಲಸ ಅರಸಿ ಕ್ವರ್ಡಿಹಿತ್ಲಿಗೆ ಬಂದು ನೆಲೆಸಿತ್ತು. ತೋಟ ಕಾರ್ಮಿಕರಾಗಿದ್ದ ಹೆತ್ತವರ ಪ್ರೋತ್ಸಾಹದಿಂದ ಉತ್ತಮ ಶಿಕ್ಷಣ ಪಡೆದು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗ ಪಡೆದ ಉಮೇಶ್, ಬೆಳಗಾವಿ ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿ, ಕೊಪ್ಪ, ಹರಿಹರಪುರ, ಎಲೆ ಮಡಲು ಶಾಖೆಗಳಲ್ಲಿ ವ್ಯವಸ್ಥಾಪಕ ರಾಗಿದ್ದರು. ಬಳಿಕ ಹಿರಿಯ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿ ಚಿಕ್ಕಮಗಳೂರು ವಿಭಾಗೀಯ ಕಚೇರಿಗೆ ವರ್ಗಾವಣೆಗೊಂಡಿದ್ದರು.
ಮಹಿಳೆಯರು ಸಾವು
ನರಸಿಂಹರಾಜಪುರ: ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಕೇರ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.
ತಾಲ್ಲೂಕಿನ ವರ್ಕಾಟೆ ಗ್ರಾಮದ ಅಡ್ಡಟ್ಟಿಯ 60 ವರ್ಷದ ಮಹಿಳೆ ಕೋವಿಡ್ನಿಂದ ಮೃತಪಟ್ಟವರು.
ಕೋವಿಡ್ ಬಾಧಿತರಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ಕಳ್ಳಿಕೊಪ್ಪ ಗ್ರಾಮದ 48 ವರ್ಷದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.
ಕೋವಿಡ್: ವ್ಯಕ್ತಿ ಸಾವು
ಕೊಪ್ಪ: ತಾಲ್ಲೂಕಿನ ಸಿದ್ದರಮಠ ನಿವಾಸಿ 65 ವರ್ಷದ ಪುರುಷ ಕೋವಿಡ್-19 ಸೋಂಕಿನಿಂದ ಇಲ್ಲಿನ ಕೋವಿಡ್ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಮೃತಪಟ್ಟಿದ್ದಾರೆ.
ಉಸಿರಾಟ ಸಮಸ್ಯೆಯಿಂದಿದ್ದ ಅವರನ್ನು ಕೊಪ್ಪದ ಕೋವಿಡ್ ಆರೋಗ್ಯ ಕೇಂದ್ರಕ್ಕೆ ಸೋಮವಾರ ಕರೆ ತರಲಾಗಿತ್ತು. ವೈದ್ಯರು ಪರೀಕ್ಷಿಸಿದಾಗ ಕೋವಿಡ್ ಸೋಂಕು ಪತ್ತೆಯಾಗಿತ್ತು. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.