ADVERTISEMENT

ಪ್ರಕೃತಿಗೆ ಧಕ್ಕೆಯಾಗದಂತೆ ಪ್ರವಾಸಿ ತಾಣಗಳ ಅಭಿವೃದ್ಧಿ

ಲಾಕ್‌ಡೌನ್‌ ಮಧ್ಯೆ ಪ್ರವಾಸಿ ತಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 16:52 IST
Last Updated 5 ಜುಲೈ 2020, 16:52 IST

ಕೊಟ್ಟಿಗೆಹಾರ: ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಬರದಂತೆ ಪ್ರಕೃತಿಗೆ ಪೂರಕವಾಗಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಮೂಡಿಗೆರೆಯ ಪ್ರವಾಸಿ ತಾಣ ಗಳಾದ ದೇವರಮನೆ, ಬಲ್ಲಾಳ ರಾಯನ ದುರ್ಗ, ಹೇಮಾವತಿ ನದಿ ಮೂಲ, ನಿಡುವಾಳೆಯ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದರು.

‘ಬಲ್ಲಾಳರಾಯನ ದುರ್ಗದ ರಾಣಿ ಝರಿ ಬಳಿ ತಾಂತ್ರಿಕ ವರದಿ ಆಧರಿಸಿ ಕಣಿವೆ ದೃಶ್ಯ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು. ಯಾವುದೇ ಕೆಲಸವನ್ನು ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಕೃತಿಗೆ ವಿರುದ್ಧವಾಗಿ ಮಾಡಬಾರದು. ಪ್ರಕೃತಿ ಸಹಜತೆಗೆ ಧಕ್ಕೆ ಬರದಂತೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು’ ಎಂದರು.

ADVERTISEMENT

ರಾಣಿ ಝರಿಯಲ್ಲಿ ಕೇಬಲ್ ಕಾರು ಯೋಜನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಲ್ಲಾಳರಾಯನ ದುರ್ಗದ ರಾಣಿ ಝರಿ ಬಳಿ ಕೇಬಲ್ ಕಾರು ಅಳವಡಿಸುವ ಚಿಂತನೆ ಇಲ್ಲ. ರಾಣಿ ಝರಿ, ಬಲ್ಲಾಳರಾಯನ ದುರ್ಗ ಚಾರಣಕ್ಕೆ ಸೂಕ್ತ ಪ್ರದೇಶವಾಗಿದೆ’ ಎಂದರು.

ನೆರೆ ಸಂತ್ರಸ್ತೆಯ ಅಳಲು:
ಬಲ್ಲಾಳರಾಯನ ದುರ್ಗದ ರಸ್ತೆಯಲ್ಲಿ ಸಾಗುತ್ತಿದ್ದ ಸಚಿವ ಸಿ.ಟಿ.ರವಿ ಅವರ ವಾಹನವನ್ನು ಅಡ್ಡಗಟ್ಟಿದ ದುರ್ಗದಹಳ್ಳಿಯ ಗ್ರಾಮಸ್ಥೆ ಲಕ್ಷ್ಮಮ್ಮ ‘ಕಳೆದ ಮಳೆಗಾಲದಲ್ಲಿ ಮನೆ ಹಾನಿಯಾಗಿದ್ದು, ಅದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮನೆ ಕಟ್ಟಿಕೊಡಲು ಪರಿಹಾರವನ್ನು ನೀಡಿ’ ಎಂದು ಅಳಲು ತೋಡಿಕೊಂಡರು.

ಶಾಸಕ ಎಂ.ಪಿ.ಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್, ಬಿಜೆಪಿ ಮಂಡಲ ಅಧ್ಯಕ್ಷ ಜೆ.ಎಸ್.ರಘು, ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ತಹಶೀಲ್ದಾರ್ ರಮೇಶ್, ಎಸಿಎಫ್ ಮುದ್ದಣ್ಣ, ಬಿಜೆಪಿ ಮುಖಂಡರಾದ ಟಿ.ಎಂ.ಗಜೇಂದ್ರ, ಬಿ.ಎಂ.ಭರತ್, ಶಶಿಧರ್, ಜಗದೀಶ್ ಗೌಡ, ಅನುಕುಮಾರ್, ಜಯರಾಮ್ ಗೌಡ, ಬಾಲಕೃಷ್ಣ ಬಾಳೂರು, ಪ್ರವೀಣ್ ಗುರ್ಜರ್, ಪರೀಕ್ಷಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.