ಚಿಕ್ಕಮಗಳೂರು: ತಾಲ್ಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಗುಹೆಯೊಳಗೆ ಫೋಟೊ ತೆಗೆಯುವುದಕ್ಕೆ ನಿರ್ಬಂಧ ಇದ್ದರೂ, ಸೋಮವಾರ ದತ್ತ ಪಾದುಕೆ ದರ್ಶನಕ್ಕೆ ತೆರಳಿದ್ದಾಗ ಅಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರ ಫೋಟೊ ಕ್ಲಿಕ್ಕಿಸಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಚಿವ ರವಿ ಅವರು ಸೋಮವಾರ ದತ್ತಪೀಠಕ್ಕೆ ತೆರಳಿದ್ದರು. ಆ ವೇಳೆ ಗುಹೆಯೊಳಗೆ ಅವರು ನಮಿಸುತ್ತಿರುವ ಫೋಟೊ ಕ್ಲಿಕ್ಕಿಸಲಾಗಿದೆ. ಫೋಟೊಗಳು ‘ವಾಟ್ಸ್ಆ್ಯಪ್’ ಗುಂಪುಗಳಲ್ಲಿ ಹರಿದಾಡುತ್ತಿದೆ.
ಗುಹೆಯೊಳಗೆ ವಿಡಿಯೊಗ್ರಫಿ, ಫೋಟೊಗ್ರಫಿ ನಿಷೇಧಿಸಲಾಗಿದೆ. ಫೋಟೊ ತೆಗೆದಿರುವುದು ವಿವಾದಕ್ಕೆ ಎಡೆಮಾಡಿದೆ.
‘ಗುಹೆಯೊಳಗೆ ಸಚಿವರ ಫೋಟೊ ತೆಗೆದಿರುವುದು ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ತಿಳಿಸಿದರು.
‘ಫೋಟೊ ತೆಗೆದಿರುವುದು ಗೊತ್ತಿಲ್ಲ. ಯಾರೋ ಸೆಲ್ಫೋನ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಬಹುದು’ ಎಂದು ಸಚಿವ ರವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.