ಕೊಪ್ಪ: ಅರಣ್ಯ ಇಲಾಖೆ ಅಭಿಪ್ರಾಯ ಪಡೆದು ಅಸೆಸ್ಮೆಂಟ್ ದಾಖಲಿಸುವಂತೆ ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದಿದ್ದು, ಇದರಿಂದ ಮೂಲ ನಿವಾಸಿಗಳು ಭೂಮಿ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂದು ಶೃಂಗೇರಿ ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಲ್ಲಿ ವಾಸದ ನಿವೇಶನ ಹೊಂದಿರುವವರಿಗೆ ಅಸೆಸ್ಮೆಂಟ್ ದಾಖಲಿಸಿ, ಭೂಮಿ ಹಕ್ಕು ನೀಡಲು ಮುಂದಾಗಿದೆ. ಆದರೆ, ಡಿ.ಎಫ್.ಒ ನಂದೀಶ್ ಅವರು ಬರೆದ ಪತ್ರ ಬಡವರ, ಶ್ರಮಿಕರ, ದಲಿತರ ಭೂಮಿ ಕಸಿದುಕೊಳ್ಳುವ ರೀತಿಯಲ್ಲಿ ಇದೆ. ಪತ್ರದ ಮೂಲಕ ನೀಡಿದ ಸೂಚನೆ ಹಿಂಪಡೆಯಬೇಕು ಇಲ್ಲದಿದ್ದರೆ ಡಿ.ಎಫ್.ಒ ಕಚೇರಿ ಎದುರು ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು.
ಹಲವು ವರ್ಷಗಳಿಂದ ಭೂಮಿ ದಾಖಲೆಗಾಗಿ ಕಾಯುತ್ತಿರುವ ಜಿಲ್ಲೆಯ ವಾಸಿಗಳಿಗೆ ನಿರಾಸೆಯಾಗಿದೆ. ಕೊಪ್ಪ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ಪೈಕಿ ಸುಮಾರು 31 ಸಾವಿರ ಜನರು ಅಸೆಸ್ಮೆಂಟ್ ದಾಖಲಾತಿಗೆ ಕಾಯುತ್ತಿದ್ದು, ಇವರಿಗೆ ಸಮಸ್ಯೆ ಎದುರಾಗಲಿದೆ. ನಮೂನೆ 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೂ ಸಹ ಅರಣ್ಯ ಇಲಾಖೆಯ ಒಂದೇ ಅಭಿಪ್ರಾಯ ನೀಡಿಲ್ಲ ಎಂದು ದೂರಿದರು.
ಜನಪರವಿಲ್ಲದ ಇಂತಹ ಅಧಿಕಾರಿಗಳು ಮಲೆನಾಡಿಗೆ ಅವಶ್ಯಕತೆಯಿಲ್ಲ. ನಂದೀಶ್ ಅವರು ಸ್ವತಃ ಬೇರೆಡೆ ವರ್ಗವಣೆಗೊಳ್ಳಬೇಕು. ಇಲ್ಲದಿದ್ದರೇ ಜನರೇ ಮುಂದಿನ ದಿನಗಳಲ್ಲಿ ವರ್ಗಾವಣೆ ಮಾಡುತ್ತಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.