ನರಸಿಂಹರಾಜಪುರ: ‘ಕ್ರೋಧಿ ನಾಮ ಸಂವತ್ಸರದಲ್ಲಿ ಮಳೆ ಕಡಿಮೆಯಾಗಲಿದೆ’ ಎಂದು ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಸಿಂಹನಗದ್ದೆ ಬಸ್ತಿಮಠದಲ್ಲಿ ಯುಗಾದಿಯ ಅಂಗವಾಗಿ ಬಸ್ತಿಮಠದ 1008 ಚಂದ್ರಪ್ರಭ ತೀರ್ಥಂಕರ ಬಸದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಂಚಾಂಗ ಶ್ರವಣ ಮಾಡಿದರು.
‘ಈ ವರ್ಷ 20 ಕೊಳಗ ಮಳೆ ಮಾತ್ರ ಬರಲಿದೆ. ಅದರಲ್ಲಿ 10 ಕೊಳಗ ಮಳೆ ಸಮದ್ರದಲ್ಲಿ ಸುರಿಯಲಿದೆ. 6 ಕೊಳಗ ಬೆಟ್ಟಗಳಲ್ಲಿ ಬಿದ್ದು ವ್ಯರ್ಥವಾಗಲಿದೆ. ಜನರಿಗೆ ಸಿಗುವುದು ಕೇವಲ 4 ಕೊಳಗ ಮಳೆ ಮಾತ್ರ’ ಎಂದರು. ಕ್ರೋಧಿ ನಾಮ ಸಂವತ್ಸರದಲ್ಲಿ ಒಳ್ಳೆ ಫಲಕ್ಕಿಂತ ಕೆಟ್ಟ ಫಲವೇ ಜಾಸ್ತಿಯಾಗಲಿದೆ. ಪರಸ್ಪರ ವಿರಸ, ಹಾನಿ ಜಾಸ್ತಿಯಾಗಲಿದೆ’ ಎಂದರು.
ಜೈನ ಸಂಪ್ರದಾಯದ ಪ್ರಕಾರ ಭಗವಾನ್ ಆದಿನಾಥ ತೀರ್ಥಂಕರರು ಚತುರ್ಥ ಕಾಲ ಮುಗಿಸಿ ಪಂಚಮ ಕಾಲ ಸಮೀಪಿಸುತ್ತಿದ್ದಂತೆ ಜನರ ಬದುಕಿಗೆ ಬೇಕಾದ ಅಸಿ, ಮಸಿ, ಕೃಷಿ, ಶಿಲ್ಪ ಮತ್ತು ವಾಣಿಜ್ಯ ಸೇರಿದ 5 ವಿಧ್ಯೆಗಳನ್ನು ತಿಳಿಸಿಕೊಟ್ಟ ದಿನವೇ ಯುಗಾದಿಯಾಗಿದೆ. ಆದ್ದರಿಂದ ಯುಗದ ಆದಿಯೇ ಯುಗಾದಿ ಎಂದರು. ಭಕ್ತರಿಗೆ ಬೇವು, ಬೆಲ್ಲ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.