ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಮಲ್ಲೇನಹಳ್ಳಿ, ಸಿದ್ದಾಪುರ ಹಾಗೂ ತ್ಯಾಗದಬಾಗಿ ತಾಂಡಾದ 681 ಮತದಾರರು ಇರುವ ಬೂತ್ ಸಂಖ್ಯೆ 186ರಲ್ಲಿ ಮತದಾನವನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಯಿತು.
ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ತೀರ್ಥೇಶ್, ‘ಐವತ್ತು ವರ್ಷಗಳಿಂದ ನಾವು ಇಲ್ಲಿ ವಾಸವಾಗಿದ್ದೇವೆ. ಸರ್ಕಾರ ನಮ್ಮ ಗ್ರಾಮಗಳ ಹೆಸರನ್ನು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿಲ್ಲ. ಹಕ್ಕುಪತ್ರಗಳು ಸೇರಿದಂತೆ ಜಮೀನಿನ ನೋಂದಣಿ ಪತ್ರಗಳನ್ನು ನೀಡಿಲ್ಲ. ಗ್ರಾಮಕ್ಕೆ ಸೌಲಭ್ಯಗಳನ್ನು ಒದಗಿಸಿಲ್ಲ. ಹೀಗಾಗಿ, ಯಾರೂ ಮತದಾನದ ಹಕ್ಕು ಚಲಾಯಿಸಲಿಲ್ಲ’ ಎಂದರು.
ಉಪ ವಿಭಾಗಾಧಿಕಾರಿ ಬಿ.ಆರ್.ರೂಪಾ ಮಾತನಾಡಿ, ‘ಗ್ರಾಮಸ್ಥರು ಈ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ತಿಳಿಸಿದ್ದರು. ತಾಲ್ಲೂಕು ಆಡಳಿತ ಗ್ರಾಮಸ್ಥರ ಮನವೊಲಿಸುವ ಎಲ್ಲ ಪ್ರಯತ್ನವನ್ನು ನಡೆಸಿತ್ತು. ಗ್ರಾಮಸ್ಥರು ಪಟ್ಟು ಸಡಿಲಿಸದೇ ಮತದಾನದಲ್ಲಿ ಪಾಲ್ಗೊಂಡಿಲ್ಲ. ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ’ ಎಂದರು.
ತಹಶೀಲ್ದಾರ್ ಧರ್ಮೋಜಿರಾವ್ ನೇತೃತ್ವದಲ್ಲಿ ಗುರುವಾರವೂ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಆದರೂ ಗ್ರಾಮಸ್ಥರು ಮತದಾನದಿಂದ ದೂರ ಉಳಿದು ಆಡಳಿತಕ್ಕೆ ಬಿಸಿ ಮುಟ್ಟಿಸಿದರು.
ಕಳಸ ವರದಿ: ಕಳಸ ತಾಲ್ಲೂಕಿನ ಇಡಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಕೊಡಿಗೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಕೆಳಭಾಗದ ಮತಕೇಂದ್ರದಲ್ಲಿ ಇವರು ಮತದಾನ ಮಾಡಬೇಕಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.