ADVERTISEMENT

ನೌಕರರ ಸಮಸ್ಯೆಗೆ ಸರ್ಕಾರ ಸ್ಪಂದನೆ

ಕಡೂರು: ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಬೆಳ್ಳಿಪ್ರಕಾಶ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 5:52 IST
Last Updated 4 ಜನವರಿ 2022, 5:52 IST
ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಶಾಸಕ ಬೆಳ್ಳಿಪ್ರಕಾಶ್ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಎಂ.ತಿಪ್ಪೇಶ್, ತಹಶೀಲ್ದಾರ್ ಜೆ.ಉಮೇಶ್, ಭಂಡಾರಿ ಶ್ರೀನಿವಾಸ್, ಸುದರ್ಶನ್ ಇದ್ದರು.
ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಶಾಸಕ ಬೆಳ್ಳಿಪ್ರಕಾಶ್ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಎಂ.ತಿಪ್ಪೇಶ್, ತಹಶೀಲ್ದಾರ್ ಜೆ.ಉಮೇಶ್, ಭಂಡಾರಿ ಶ್ರೀನಿವಾಸ್, ಸುದರ್ಶನ್ ಇದ್ದರು.   

ಕಡೂರು: ‘ಸರ್ಕಾರದ ಯಾವುದೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಬಹುದೊಡ್ಡದು’ ಎಂದು ಶಾಸಕ. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ತಿಳಿಸಿದರು.

ಕಡೂರಿನಲ್ಲಿ ಸೋಮವಾರ ನಡೆದ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ನೌಕರರ ಹಲವಾರು ಸಮಸ್ಯೆಗಳಿಗೆ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸಿದೆ. ಕೇಂದ್ರದ ವೇತನಕ್ಕೆ ಸಮನಾದ ವೇತನವನ್ನು ರಾಜ್ಯ ಸರ್ಕಾರದ ನೌಕರರಿಗೂ ನೀಡುವಂತಹ ನಿಟ್ಟಿನಲ್ಲಿ ಚಿಂತನೆಗಳು ನಡೆದಿದ್ದು ಶೀಘ್ರವೇ ಸಾಕಾರಗೊಳ್ಳಲಿವೆ ಎಂಬ ವಿಶ್ವಾಸ ವಿದೆ. ಸಂಘಕ್ಕೆ ಒಂದು ಎಕರೆ ಜಾಗ ಕೇಳಿದ್ದು, ಸಾಧ್ಯವಿರುವ ಕಡೆ ನೀಡಲು ಇತಿಮಿತಿಯಲ್ಲಿ ಪ್ರಯತ್ನಿಸು ತ್ತೇನೆ. ಸಂಘದ ಭವನಕ್ಕೆ ಅಗತ್ಯವಿರುವ ಅನುದಾನ ನೀಡುತ್ತೇನೆ’ ಎಂದರು.

ADVERTISEMENT

ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಎಂ.ತಿಪ್ಪೇಶ್ ಮಾತನಾಡಿ, ‘ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗಾಗಿ ಮತ್ತು ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘ ಸದಾ ಶ್ರಮಿಸುತ್ತಿದೆ’ ಎಂದರು.

ನೌಕರರ ರಾಜ್ಯ ಘಟಕದ ಉಪಾಧ್ಯಕ್ಷ ಮೋಹನ್, ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರ, ಕಡೂರು ಬೀರೂರು ಪುರಸಭಾ ಅಧ್ಯಕ್ಷರಾದ ಸುದರ್ಶನ್ ಮತ್ತು ಭಂಡಾರಿ ಶ್ರೀನಿವಾಸ್, ತಹಶೀಲ್ದಾರ್ ಜೆ.ಉಮೇಶ್, ಇಒ ಡಾ.ದೇವರಾಜ ನಾಯ್ಕ, ರಾಜ್ಯ ಪರಿಷತ್ ಸದಸ್ಯ ಪೂರ್ಣೇಶ್, ಕೆ.ಆರ್.ಮಹೇಶ್ ಒಡೆಯರ್, ಪಿಎಸ್ಐ ಎನ್.ಕೆ.ರಮ್ಯಾ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅರೇಹಳ್ಳಿ ಮಲ್ಲಿಕಾರ್ಜುನ್, ಗಂಗಾಧರ್, ಭೈರೇಗೌಡ, ಲವಕುಮಾರ್ ಇದ್ದರು.

‘ಬೇಡಿಕೆ ಈಡೇರಿಸಿ’

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ ಮಾತನಾಡಿ, ‘ಸದಾ ಒತ್ತಡದಲ್ಲಿರುವ ಸರ್ಕಾರಿ ನೌಕರರಿಗೆ ಏಕತಾನತೆ ಹೋಗಲಾಡಿಸಲು ಇಂತಹ ಕ್ರೀಡಾಕೂಟಗಳು ಅವಶ್ಯಕವಾಗಿವೆ’ ಎಂದರು.

‘ಕೇಂದ್ರ ನೌಕರರಿಗೆ ಸಮನಾದ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡುವ ಬಗ್ಗೆ ರಾಜ್ಯದ ಎಲ್ಲ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಿದ್ದಾರೆ. ಈ ಬಾರಿ ಅದು ಸಾಕಾರಗೊಳ್ಳುವ ನಿರೀಕ್ಷೆಯಿದೆ. ಸರ್ಕಾರಿ ನೌಕರರು ಬೇಸರಗೊಂಡರೆ ಆಡಳಿತ ಯಂತ್ರವೇ ಕುಸಿಯುವ ಸಾಧ್ಯತೆಗಳಿರುವುದು ವಾಸ್ತವಿಕ ಸಂಗತಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.