ಶಾಸಕ ಟಿ.ಡಿ.ರಾಜೇಗೌಡ ಅವರ ಅಧ್ಯಕ್ಷತೆಯಲ್ಲಿ ಕೊಪ್ಪ ಪಟ್ಟಣ ಆಶ್ರಯ ಸಮಿತಿ ಸಭೆ ನಡೆಯಿತು
ಕೊಪ್ಪ: ‘ಅರ್ಹ ಫಲಾನುಭವಿಗೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗಿದೆ' ಎಂದು ಶಾಸಕ ಟಿ.ಡಿರಾಜೇಗೌಡ ಹೇಳಿದರು.
ಸೋಮವಾರ ಪಟ್ಟಣ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಇಂದು ಪೌರ ಕಾರ್ಮಿಕ 6 ಮಂದಿ, ಪರಿಶಿಷ್ಟ ಜಾತಿಯ 5, ಪರಿಶಿಷ್ಟ ಪಂಗಡದ 2, ಅಂಗವಿಕಲ 3 ಮಂದಿಯನ್ನು ಆಯ್ಕೆ ಮಾಡಿದ್ದೇವೆ’ ಎಂದು ತಿಳಿಸಿದರು.
'ನಿವೇಶನ ಹಂಚಿಕೆಗೆ ಅಂತಿಮ ಪಟ್ಟಿ ತಯಾರಿಸಿ ನೋಟಿಸ್ ಬೋರ್ಡ್ನಲ್ಲಿ ಪ್ರಕಟ ಮಾಡಿದ್ದೆವು. ದಾಖಲೆ ಇಲ್ಲದ ಬೇನಾಮಿ ತಕರಾರು ಅರ್ಜಿ ಬಂದಿದ್ದವು. ಅವುಗಳನ್ನು ಮೇಲ್ನೋಟಕ್ಕೆ ಪರಿಶೀಲನೆ ಮಾಡಿದ್ದೇವೆ. ಅವುಗಳನ್ನು ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ದಾಖಲೆ ಸಹಿತ ಬಂದ ತಕರಾರು ಅರ್ಜಿಗಳನ್ನು ಈ ಹಿಂದೆಯೇ ಪರಿಶೀಲಿಸಿ ಕ್ರಮ ವಹಿಸಿದ್ದೇವೆ' ಎಂದರು.
'ಒಟ್ಟು 103 ಅರ್ಜಿಗಳು ಬಂದಿದ್ದವು. ಈ ಪೈಕಿ ಮೊದಲು ಲಭ್ಯವಿದ್ದ 84 ನಿವೇಶನಗಳ ಪೈಕಿ 34 ವಿತರಣೆ ಮಾಡಲಾಗಿದೆ. ಪ್ರಸ್ತುತ ಸಾಮಾನ್ಯರಿಂದ 52, ವಿಧವೆಯರಿಂದ 12 ಅರ್ಜಿ ಇದೆ. ಮೂಲೆ ನಿವೇಶನ ಸೇರಿ 52 ನಿವೇಶನಗಳು ಲಭ್ಯ ಇವೆ. ಅರ್ಜಿ ಸಲ್ಲಿಸಿದ ಕೆಲವರು ಬೇರೆ ಮನೆ ಕಟ್ಟಿದ್ದಾರೆ ಎಂದು ಇಂದಿನ ಸಭೆಯಲ್ಲಿ ಪ್ರಸ್ತಾಪವಾಗಿದೆ. ಈ ವಾರದಲ್ಲಿ ಪರಿಶೀಲನೆ ಮಾಡಿ, ಮುಂದಿನ ವಾರ ಸಭೆ ಕರೆದು ಅಂತಿಮಗೊಳಿಸಿ ಆಯ್ಕೆ ಮಾಡಲಿದ್ದೇವೆ' ಎಂದರು.
‘ನಿವೇಶನಕ್ಕಾಗಿ ಅರ್ಜಿಗಳು ಈಗಲೂ ಸಲ್ಲಿಕೆಯಾಗುತ್ತಿವೆ. ಉಳಿದಂತವರಿಗೆ ಪಟ್ಟಣ ವ್ಯಾಪ್ತಿಯಲ್ಲಿ ಖಾಲಿ ಜಾಗ ಇದ್ದರೆ, ಅದನ್ನು ಪತ್ತೆ ಹಚ್ಚಿ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲು ಇಂದಿನ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್ ಲಿಖಿತಾ ಮೋಹನ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಚ್.ಆರ್.ರೇಖಾ, ಪಟ್ಟಣ ಆಶ್ರಯ ಸಮಿತಿ ಸಭೆ ನಾಮನಿರ್ದೇಶೀತ ಸದಸ್ಯರಾದ ಭಾರತಿ ಶಂಕರ್, ತುಳಸಮ್ಮ, ಜಹುರ್ ಹುಸೇನ್, ಸತೀಶ್, ಮುಖ್ಯಾಧಿಕಾರಿ ಕೊರಿಯಾಕೋಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.