ಕಾನೂರು(ಎನ್.ಆರ್.ಪುರ): ಕಾನೂರು ಗ್ರಾಮ ಪಂಚಾಯಿತಿಯ ಕೆರೆಮನೆಯಲ್ಲಿ ಜಲಜೀವನ್ ಯೋಜನೆಯಡಿ ₹46ಲಕ್ಷ ವೆಚ್ಚದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕಳಪೆಯಾಗಿದ್ದು ನೂರಾರು ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಕಾನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ರತ್ನಾಕರ್ ಆರೋಪಿಸಿದರು.
‘ಚಿಕ್ಕಮಗಳೂರು ಭಾಗದ ಅಪ್ಪಾಜಿ ಪ್ರಕಾಶ್ ಎಂಬುವರು ಕೆರೆಮನೆಯಲ್ಲಿ ಜಲ ಜೀವನ್ ಯೋಜನೆಯಡಿ ₹46 ಲಕ್ಷ ವೆಚ್ಚದ ಕಾಮಗಾರಿಯ ಟೆಂಡರ್ ತೆಗೆದುಕೊಂಡಿದ್ದರು. ಕೆರೆಮನೆ–ಎಲೆಗುಡಿಗೆಗೆ ನೀರಿನ ಪೈಪ್ ಅಳವಡಿಸಲು ಜೇಸಿಬಿ ಮೂಲಕ ರಸ್ತೆಯ ಪಕ್ಕದಲ್ಲಿ ಟ್ರಂಚ್ ನಿರ್ಮಿಸಿ ಈ ಹಿಂದೆ ಗ್ರಾಮ ಪಂಚಾಯಿತಿಯು ಕುಡಿಯುವ ನೀರಿಗಾಗಿ ಅಳವಡಿಸಿದ್ದ ಪೈಪ್ ಗಳನ್ನು ಹೊಡೆದು ಹಾಕಿದ್ದಾರೆ. ನಂತರ ಹೊಸದಾಗಿ ಎಚ್.ಡಿ.ಪಿ ಪೈಪ್ಗಳನ್ನು ಕೆಲವು ಕಡೆ ಮಾತ್ರ ಅಳವಡಿಸಿದ್ದಾರೆ. ಪೈಪ್ ಸರಿಯಾಗಿ ಜೋಡಿಸದೆ ನೀರು ಪೋಲಾಗುತ್ತಿದೆ. ಇದರಿಂದ ನೀರು ಸಮರ್ಪಕವಾಗಿ ಸರಬರಾಜಾಗದೆ ನೂರಾರು ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ’ ಎಂದು ಆರೋಪಿಸಿದರು.
‘ರಸ್ತೆ ಬದಿಯಲ್ಲಿ ಪೈಪ್ ಅಳವಡಿಸಲು ತೋಡಿದ ಗುಂಡಿಯನ್ನು ಕೆಲವು ಕಡೆಗಳಲ್ಲಿ ಮುಚ್ಚದೆ ಹಾಗೆ ಬಿಡಲಾಗಿದೆ. ಈ ಯೋಜನೆಯಡಿ ಕೊಳವೆಬಾವಿ, ಟ್ಯಾಂಕ್ ನಿರ್ಮಾಣ ಮಾಡಬೇಕಾಗಿತ್ತು. ಅದನ್ನು ಮಾಡದೆ ಶೇ25ರಷ್ಟು ಮಾತ್ರ ಕಳಪೆ ಕಾಮಗಾರಿ ಮಾಡಿ ₹18.80 ಲಕ್ಷ ಬಿಲ್ ಮಾಡಿಸಿಕೊಂಡ ಗುತ್ತಿಗೆದಾರರು ಮತ್ತೆ ಈ ಕಡೆ ತಿರುಗಿ ನೋಡಿಲ್ಲ. ದೂರವಾಣಿ ಕರೆಯೂ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಚಿಕ್ಕಮಗಳೂರಿನ ಎ.ಇ.ಇ ಹಾಗೂ ನರಸಿಂಹರಾಜಪುರ ಎ.ಇ.ಇ ಅವರಿಗೆ ದೂರು ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಲಾಗುವುದು. ಗ್ರಾಮ ಪಂಚಾಯಿತಿ ಪೈಪ್ ಲೈನ್ ಹಾಳು ಮಾಡಿರುವುದಕ್ಕೆ ಗುತ್ತಿಗೆದಾರರಿಗೆ ದಂಡ ಹಾಕಬೇಕು. ಕಳಪೆ ಕಾಮಗಾರಿ ಮಾಡಿರುವುದಕ್ಕೆ ಸಂಬಂಧಪಟ್ಟವರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.