ADVERTISEMENT

ಜಾಗರ ಹೋಬಳಿಗೆ ₹21 ಕೋಟಿ ಅನುದಾನ: ಎಚ್.ಡಿ.ತಮ್ಮಯ್ಯ

ಶಿರವಾಸೆ, ಮೇಲಿನಹುಲವತ್ತಿ ಗ್ರಾ.ಪಂ ವ್ಯಾಪ್ತಿಯ ಜನ ಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 12:53 IST
Last Updated 8 ಏಪ್ರಿಲ್ 2025, 12:53 IST
ಜನಸಂಪರ್ಕ ಸಭೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು
ಜನಸಂಪರ್ಕ ಸಭೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು   

ಚಿಕ್ಕಮಗಳೂರು: ಜಾಗರ ಹೋಬಳಿಯ ಅಭಿವೃದ್ಧಿ ಕಾಮಗಾರಿಗಳಿಗೆ ₹21 ಕೋಟಿ ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಆರಂಭವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಜಾಗರ ಹೋಬಳಿಯ ಶಿರವಾಸೆ ಹಾಗೂ ಮೇಲಿನಹುಲುವತ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಸಬಾ, ಲಕ್ಯಾ, ಸಖರಾಯಪಟ್ಟಣ, ದೇವನೂರು ಭಾಗದಲ್ಲಿ ₹20 ಕೋಟಿಗೂ ಕಡಿಮೆ ಅನುದಾನ ಒದಗಿಸಲಾಗಿದೆ. ಜಾಗರ ಹೋಬಳಿಗೆ ₹21 ಕೋಟಿ ಒದಗಿಸಲಾಗಿದ್ದು, ಈ ಪೈಕಿ ₹13 ಕೋಟಿಯನ್ನು ವಿಸ್ತೀರ್ಣ ದೊಡ್ಡದಾಗಿರುವ ಶಿರವಾಸೆ ಗ್ರಾಮ ಪಂಚಾಯಿತಿಗೆ ನೀಡಲಾಗಿದೆ. ಕಡಿಮೆ ವಿಸ್ತೀರ್ಣವಿರುವ ಮೇಲಿನ ಹುಲುವತ್ತಿಗೆ ಉಳಿದ ಹಣ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ ಎಂದರು.

ADVERTISEMENT

ಜಾಗರದಿಂದ ನೆತ್ತಿಚೌಕದ ತನಕ ₹6 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ಹೊಂಡದಕಾನು ತನಕ ರಸ್ತೆಗೆ ₹5 ಕೋಟಿ ವೆಚ್ಚತದ ರಸ್ತೆ ನಿರ್ಮಾಣವಾಗಲಿದೆ. ಹೊನ್ನಾಳದಿಂದ ಗಾಳಿಗುಡ್ಡದ ತನಕ ರಸ್ತೆಗೆ ₹2 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಅಲ್ಲಿಂದ ಮುಂದಕ್ಕೆ ತಲಾ ₹1 ಕೋಟಿ ವೆಚ್ಚದ ಎರಡು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

₹25 ಲಕ್ಷ ವೆಚ್ಚದಲ್ಲಿ ಶಿರವಾಸೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಮೇಲಿನ ಹುಲುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ₹40 ಲಕ್ಷ ವೆಚ್ಚದ ಸೇತುವೆ ಉದ್ಘಾಟಿಸಲಾಗಿದೆ. ಹೊನ್ನಾಳದಿಂದ ಸಿದ್ದರಬಾನು ತನಕ  ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ₹2 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಿಲ್ಲವ ಸಮುದಾಯ ಭವನ ಮುಕ್ತಾಯಗೊಳಿಸಲು ₹10 ಲಕ್ಷ ಒದಗಿಸಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.

ಗ್ರಾಮಸ್ಥರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಆಗಬಾರದು. ಹಾಗಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆತಂದು ಸಮಸ್ಯೆ ಆಲಿಸುವ ಕೆಲಸ ಮಾಡಲಾಗಿದೆ. ಇಲ್ಲಿ ಗ್ರಾಮಸ್ಥರು ನೀಡುವ ಅರ್ಜಿ ಪಡೆದು ಆ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಶಾಸಕರು ಜನಸಂಪರ್ಕ ಸಭೆ ನಡೆಸುತ್ತಿದ್ದೇವೆ ಎಂದರು.

ಶಿರವಾಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್. ರಘುನಾಥ, ಉಪಾಧ್ಯಕ್ಷೆ ರಾಧಾ, ಮೇಲಿನಹುಲುವತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿರಾಮ್, ಉಪಾಧ್ಯಕ್ಷೆ ಕೆ.ಸಿ.ಭಾರತಿ, ಜಿ.ಪಂ. ಉಪ ಕಾರ್ಯದರ್ಶಿ ಶಂಕರ್ ಕೊರವರ್, ತಹಶೀಲ್ದಾರ್ ಸುಮಂತಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ಥಬಾಬು, ಗ್ರಾ.ಪಂ ಸದಸ್ಯರಾದ ಪ್ರೇಮಾಕ್ಷಿ ಎಸ್.ಅಮೀನ್, ದಾಕ್ಷಾಯಿಣಿ, ವಿಮಲಾ, ಪಾರ್ವತಿ, ಎಸ್. ಉಮಾ, ಗಣೇಶ್, ಟಿ.ಎಸ್.ರಘು, ಎನ್.ಪ್ರೀತಿ, ರವಿ ರೇವಣ್ಣ, ಶಾರದಾಂಬಾ  ಭಾಗವಹಿಸಿದ್ದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.