ADVERTISEMENT

ಅಭಿವೃದ್ಧಿಯೇ ಮೂಲ ಮಂತ್ರ: ಸುಧಾಕರ ಶೆಟ್ಟಿ

ಕೊಪ್ಪದಲ್ಲಿ ನಡೆದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ; ಗಣ್ಯರು ಭಾಗಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:04 IST
Last Updated 4 ಅಕ್ಟೋಬರ್ 2022, 6:04 IST
ಕೊಪ್ಪದಲ್ಲಿ ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಸಮ್ಮುಖದಲ್ಲಿ ನಾರ್ವೆ ಅನಿಲ್ ಕುಮಾರ್ ಮತ್ತಿತರರು ಜೆಡಿಎಸ್ ಸೇರ್ಪಡೆಗೊಂಡರು.
ಕೊಪ್ಪದಲ್ಲಿ ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಸಮ್ಮುಖದಲ್ಲಿ ನಾರ್ವೆ ಅನಿಲ್ ಕುಮಾರ್ ಮತ್ತಿತರರು ಜೆಡಿಎಸ್ ಸೇರ್ಪಡೆಗೊಂಡರು.   

ಕೊಪ್ಪ: ‘ಜೆಡಿಎಸ್ ಪಕ್ಷ ಧರ್ಮ, ಜಾತಿ ಆಧಾರಿತ ರಾಜಕೀಯ ಮಾಡುವುದಿಲ್ಲ, ಅಭಿವೃದ್ಧಿಯೇ ಮೂಲ ಮಂತ್ರ. ಕ್ಷೇತ್ರದಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಡಿಸಿದ ತೃಪ್ತಿ ಇದೆ’ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಹೇಳಿದರು.

ಬಾಳಗಡಿಯಲ್ಲಿನ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು 20ಕ್ಕೂ ಹೆಚ್ಚು ಮಂದಿಯನ್ನು ಪಕ್ಷಕ್ಕೆ ಬರಮಾಡಿಕೊಂಡು ಬಳಿಕ ಮಾತನಾಡಿದರು.

‘ಶೃಂಗೇರಿ ಕ್ಷೇತ್ರದಲ್ಲಿ ಬೆದರಿಕೆಯ ತಂತ್ರಗಾರಿಕೆ ಮೇರೆ ಮೀರುತ್ತಿದೆ, ಆದರೆ ಜೆಡಿಎಸ್ ಪಕ್ಷ ಅದನ್ನು ಎದುರಿಸಿ ಸದೃಢವಾಗಿ ಬೆಳೆಯುತ್ತಿದೆ’ ಎಂದರು.

ADVERTISEMENT

‘ನಮಗೆ ಕೇಸರಿ ಬಾವುಟ, ಕೇಸರಿ ಧ್ವಜ, ಕೇಸರಿ ಬಣ್ಣ ವಿರೋಧಿಯಲ್ಲ. ಕೇಸರಿ ಬಣ್ಣ ಬಿಜೆಪಿಗೆ ಸೀಮಿತವಲ್ಲ, ನಮ್ಮದು ಕೇಸರಿ ವಿರೋಧಿಯಲ್ಲ, ಹಿಂದೂ ವಿರೋಧಿ ಧೋರಣೆಯಲ್ಲ. ಬೇರೆಯವರಂತೆ ನಾನು ಒಂದು ಪಕ್ಷದಿಂದ 7 ಸಾರಿ ಸ್ಪರ್ಧಿಸುವುದಿಲ್ಲ, ಇತರರಿಗೂ ಅವಕಾಶ ನೀಡಿ ಅವರನ್ನು ಬೆಳೆಸುತ್ತೇನೆ’ ಎಂದರು.

ಪಕ್ಷದ ರಾಜ್ಯ ಮುಖಂಡ ಎಚ್.ಜಿ.ವೆಂಕಟೇಶ್ ಮಾತನಾಡಿ, ‘ಕ್ಷೇತ್ರದಲ್ಲಿ ಶಾಸಕರು ಬೇರೆ ಪಕ್ಷ, ಅಧಿಕಾರದಲ್ಲಿರುವ ಸರ್ಕಾರವೇ ಬೇರೆ ಪಕ್ಷದ್ದಾಗಿದೆ, ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದು ಹೇಳಿದರು.

ಪಕ್ಷ ಸೇರ್ಪಡೆಗೊಂಡ ನರಸೀಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನಿಲ್ ಕುಮಾರ್ ನಾರ್ವೆ ಮಾತನಾಡಿ, ‘20 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಹಿಂದೂ ಸಂಘಟನೆಯಲ್ಲಿ ಮುಂಚೂಣಿ ನಾಯಕನಾಗಿದ್ದೆ. ಆದರೆ, ಹಿಂದೂ ಹೆಸರಿನಲ್ಲಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ, ಇದರಿಂದ ಬೇಸತ್ತು ಜೆಡಿಎಸ್ ಸೇರಿದ್ದೇನೆ’ ಎಂದು ಹೇಳಿದರು.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಿಲ್ ಕುಮಾರ್ ನಾರ್ವೆ ಅವರನ್ನು ತಾಲ್ಲೂಕು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಕ್ಷೇತ್ರ ಜೆಡಿಎಸ್ ಘಟಕದ ಅಧ್ಯಕ್ಷ ಭಂಡಿಗಡಿ ದಿವಾಕರ ಭಟ್, ಪಕ್ಷದ ಮುಖಂಡ ಎಚ್. ಎಸ್. ಕಳಸಪ್ಪ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.