ADVERTISEMENT

ಭೇದ ಅಳಿಸಿ ವಿವಿಧತೆಯಲ್ಲಿ ಏಕತೆ ಎತ್ತಿಹಿಡಿದವರು ಕನಕದಾಸರು: ಸಿ.ಟಿ ರವಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:44 IST
Last Updated 9 ನವೆಂಬರ್ 2025, 4:44 IST
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಶ್ರೀಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಲಾಯಿತು
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಶ್ರೀಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಲಾಯಿತು   

ಚಿಕ್ಕಮಗಳೂರು: ‘ಭಕ್ತ ಹಾಗೂ ಭಗವಂತನ ಸಂಬಂಧವನ್ನು ಸಾಕ್ಷಾತ್ಕರಿಸಿ ತೋರಿಸಿದವರು ಭಕ್ತ ಶ್ರೇಷ್ಠ ಕನಕದಾಸರು. ಆಧ್ಯಾತ್ಮಿಕ ಉನ್ನತಿಯ ನಿದರ್ಶನವೂ ಅವರೇ. ಹೀಗಾಗಿ 538 ವರ್ಷಗಳ ನಂತರವೂ ಸಮಾಜಕ್ಕೆ ಪ್ರೇರಣೆಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕ ಪ್ರಜ್ಞೆಯನ್ನು ಜಾಗೃತಿಗೊಳಿಸಲು ಭಾರತದಲ್ಲಿ ಭಕ್ತಿ ಚಳವಳಿ ಆಯಾ ಕಾಲ ಕಾಲಕ್ಕೆ ತನ್ನ ಪ್ರಭಾವವನ್ನು ಬೀರುತ್ತಾ ಬಂದಿದೆ. ಪರಕೀಯ ಆಕ್ರಮಣಕಾರರು, ಈ ದೇಶದ ಸಂಸ್ಕೃತಿಯನ್ನು ನಾಶ ಮಾಡಬೇಕೆಂದು ಬಂದವರನ್ನು ಜನಸಾಮಾನ್ಯರಲ್ಲಿದ್ದಂತಹ ಭಕ್ತಿ ಚಳವಳಿಗಳು, ಭಕ್ತಿ, ಶ್ರದ್ಧೆ ಉದ್ದೇಶ ಸಾಧಿಸಲು ಹವಣಿಸಿದ ಅವರನ್ನು ಮಣಿಸಿತು ಎಂದರು.

ADVERTISEMENT

‘ಭೇದ ಅಳಿಸಿ, ವಿವಿಧತೆಯಲ್ಲಿ ಏಕತೆಯನ್ನು ಎತ್ತಿಹಿಡಿದವರು ಕನಕದಾಸರು. ಬಸವಣ್ಣ, ಕನಕದಾಸರು, ಪುರಂದರದಾಸರು, ಸಂತ ಶಿಶುನಾಳ ಶರೀಫರು, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಗೌರವಿಸುತ್ತಿರುವುದು ಅವರ ಬದುಕಿನ ರೀತಿಯ ಕಾರಣಕ್ಕಾಗಿ’ ಎಂದು ಹೇಳಿದರು. 

ಜಾತೀಯತೆ ಮತ್ತು ಅಸ್ಪೃಶ್ಯತೆಯ ಬಗ್ಗೆ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ..? ಎಂದು ಪ್ರಶ್ನಿಸಿ ಮಾನವ ಕುಲದ ಸಮಾನತೆಯನ್ನು ಎತ್ತಿ ಹಿಡಿದವರವರು ಕನಕದಾಸರು. ಭಗವಂತ ಕೂಡ ಕನಕದಾಸರ ಭಾವನೆಗೆ ಇಂಬು ಕೊಟ್ಟಂತೆ ಅವರಿರುವ ಕಡೆಗೆ ತಿರುಗಿ ದರ್ಶನ ನೀಡಿ, ತಾನು ಭೇದ ಬಯಸುವವನಲ್ಲ ಎಂದು ಜಗತ್ತಿಗೆ ಸಂದೇಶವನ್ನು ನೀಡಿದ್ದಾನೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಡಿ ತಮ್ಮಯ್ಯ, ‘ಶೋಷಿತ ವರ್ಗಕ್ಕೆ ಧ್ವನಿಯಾಗಿದ್ದವರು ಕನಕದಾಸರು. ಅವರು ಮೂಢನಂಬಿಕೆಗಳ ವಿರುದ್ಧ ಬಹಳ ಸೌಮ್ಯವಾಗಿ ಪ್ರತಿಭಟಿಸುತ್ತಿದ್ದ ಅದ್ಭುತ ಸಾಹಿತಿ, ಹೃದಯ ಸ್ಪರ್ಶಿ ಸಂಗೀತಗಾರ ಮಾತ್ರವಲ್ಲ ಸಾಮಾಜಿಕ ಹೋರಾಟಗಾರರಾಗಿದ್ದವರು. ದಾಸ ಶ್ರೇಷ್ಠರ ಸಾಲಿನಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ಕವಿಯಾಗಿ, ಕೀರ್ತನಕಾರರಾಗಿ, ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ಅವರ ಸಾಧನೆ ಸ್ಮರಣೀಯ’ ಎಂದು ಹೇಳಿದರು.

ಬುದ್ಧ, ಬಸವಣ್ಣ, ಕನಕದಾಸರು, ಡಾ.ಅಂಬೇಡ್ಕರ್ ಈ ಎಲ್ಲ ಮಹಾಪುರುಷರ ಜಯಂತಿಯನ್ನು ವರ್ಷದಲ್ಲಿ ಒಮ್ಮೆ ಆಚರಿಸುತ್ತೇವೆ, ಅವರೆಲ್ಲ ಇಂತಹುದೇ ಧರ್ಮ ಬೇಕೆಂಬ ನಿರೀಕ್ಷೆಯಲ್ಲಿ ಹುಟ್ಟಲಿಲ್ಲ. ಇವರೆಲ್ಲ ಒಂದೊಂದು ಧರ್ಮದಲ್ಲಿ ಜನಿಸಿರಬಹುದು. ಆದರೆ, ಈ ನಾಲ್ವರ ವಿಚಾರಧಾರೆ, ವರ್ಣಬೇಧ ನೀತಿ ವಿರುದ್ಧದ ನಿಲುವು ಶೋಷಿತ ವರ್ಗದವರನ್ನು ಸಮಾಜದ ಮುನ್ನೆಲೆಗೆ ತರುವುದಕ್ಕೆ ಪೂರಕವಾಗಿತ್ತು ಎಂದರು.

ಇವರೆಲ್ಲರ ಹೋರಾಟದ ನಡುವೆಯೂ ಈ ದೇಶದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಶಿಸಿಲ್ಲ ಎನ್ನುವುದು ವಿಷಾದದ ಸಂಗತಿ. ಈ ಮಹಾಪುರುಷರು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಾದವರಲ್ಲ. ಸಮ ಸಮಾಜದ ನಿರ್ಮಾಣಕ್ಕೆ ದುಡಿದವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ತಾಲ್ಲೂಕು ಕಚೇರಿ ಸಮೀಪ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಕುವೆಂಪು ಕಲಾಮಂದಿರದವರೆಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ, ನಾದಸ್ವರ, ಕನಕದಾಸರ ವೇಷಭೂಷಣ ಧರಿಸಿದ ಮಕ್ಕಳು ಗಮನ ಸೆಳೆದರು.

ಉಪನ್ಯಾಸಕಿ ದೀಪಾ ಹಿರೇಗುತ್ತಿ ಕನಕದಾಸರ ಬಗ್ಗೆ ಉಪನ್ಯಾಸ ನೀಡಿದರು. ಕೇಂದ್ರದ ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ ರವಿನಾಯಕ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರಾಜು, ರಾಜ್ಯ ಕುರುಬರ ಸಂಘದ ನಿರ್ದೇಶಕರಾದ ಪುಟ್ಟೇಗೌಡ ಹಾಗೂ ರೇಖಾ ಹುಲಿಯಪ್ಪಗೌಡ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಪಟ್ಟೇಗೌಡ ಇದ್ದರು.

ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ವೇಷಭೂಷಣದಲ್ಲಿ ಮಕ್ಕಳು
ಶ್ರೀಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಗಮನ ಸೆಳೆದ ಡೊಳ್ಳು ಕುಣಿತ
ನಗರದ ತಾಲ್ಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರವರೆಗೆ ನಡೆದ ಮೆರವಣಿಗೆ
ನಗರದ ತಾಲ್ಲೂಕು ಕಚೇರಿ ಸಮೀಪ ಶ್ರೀಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುವೆಂಪು ಕಲಾಮಂದಿರದವರೆಗೆ ನಡೆದ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.