ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಶ್ರೀಅಂಬಾಭವಾನಿ ಸಮುದಾಯ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಸದ್ಗುರು ಜನಸೇವಾ ಫೌಂಡೇಷನ್ ತರೀಕೆರೆ, ಅರಿವು ವೇದಿಕೆ ತರೀಕೆರೆ, ಕಸಾಪ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ
ತರೀಕೆರೆ: ‘ಕನ್ನಡ ಭಾಷೆ ಉಳಿಸಿ–ಬೆಳೆಸಲು ಜನಾಂದೋಲನ ಮಾಡಬೇಕು’ ಎಂದು ಕರ್ನಾಟಕ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಹೇಳಿದರು.
ರಂಗೇನಹಳ್ಳಿ ಗ್ರಾಮದ ಶ್ರೀಅಂಬಾಭವಾನಿ ಸಮುದಾಯ ಭವನದಲ್ಲಿ ಶುಕ್ರವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಸದ್ಗುರು ಜನಸೇವಾ ಫೌಂಡೇಷನ್ ತರೀಕೆರೆ, ಅರಿವು ವೇದಿಕೆ ತರೀಕೆರೆ, ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರಮಟ್ಟದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕಾರ್ಯಾಗಾರದ’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಜನರು ಅಭಿಮಾನ ತೋರಿಸಬೇಕು. ಸಂಸ್ಕೃತಿ, ಸಮಾನತೆ ಮತ್ತು ಸಹೋದರತೆ ಇಂದಿನ ದಿನಗಳಲ್ಲಿ ಬಹು ಮುಖ್ಯವಾದ ಅಂಶವಾಗಿದೆ. 12ನೇ ಶತಮಾನದಲ್ಲಿ ಶರಣರು ಕನ್ನಡವನ್ನು ಕಟ್ಟಿ ಬೆಳೆಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರತಿಯೊಂದು ಜಿಲ್ಲೆಯಲ್ಲೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಾಗಾರ ಆಯೋಜಿಸುತ್ತಿದೆ. ಚಿಕ್ಕ ಗ್ರಾಮಕ್ಕೆ ದೊಡ್ಡವರನ್ನು ಆಹ್ವಾನಿಸಿ, ಕನ್ನಡ ಭಾಷೆಯ ಸ್ಥಾನಮಾನ ಉಳಿಸಿ, ಬೆಳೆಸುವಲ್ಲಿ ಚರ್ಚಿಸಲಾಗುತ್ತಿದೆ’ ಎಂದರು.
ಬೆಂಗಳೂರು ನಗರದಲ್ಲಿ ಜನರು 116 ಉಪ ಭಾಷೆಗಳನ್ನು ಬಳಸುತ್ತಾರೆ. ಕನ್ನಡ ಭಾಷೆಗೆ ಅದ್ಯತೆ ನೀಡಬೇಕು. ಜನರ ಮಧ್ಯೆಯೇ ಕನ್ನಡ ಜೊತೆ ಚಿಂತನೆ ನೆಡೆಸಿ, ಪುಸ್ತಕ ರೂಪದಲ್ಲಿ ವರದಿಯನ್ನು ಸರ್ಕಾರಕ್ಕೆ ಕೊಡಬೇಕು ಎಂಬುದು ಈ ಕಾರ್ಯಾಗಾರದ ಮೂಲ ಉದ್ದೇಶವಾಗಿದೆ ಎಂದು ಸಂತೋಷ್ ಹಾನಗಲ್ ಹೇಳಿದರು.
ಸಂಸ್ಕೃತಿ ಚಿಂತಕ, ರಂಗಕರ್ಮಿ ಹಾಗೂ ಶಿಬಿರದ ನಿರ್ದೇಶಕ ರಾಜಪ್ಪ ದಳವಾಯಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕಾರ್ಯಾಗಾರ ನಡೆಯುತ್ತಿದೆ. ಕಾರ್ಯಾಗಾರ ಎಂದರೆ ಕಮ್ಮಟ ಎಂದು ಅರ್ಥ. ಕಮ್ಮಟ ಅತ್ಯಂತ ಮಹತ್ವದ್ದು, ಶಿಕ್ಷಕರು ಒಳ್ಳೆಯ ಅಭಿಪ್ರಾಯಗಳನ್ನು ಮೂಡಿಸುತ್ತಾರೆ. ಶಿಕ್ಷಕರು ಸಮಾಜದ ವಿಜ್ಞಾನಿಗಳು, ಶಿಕ್ಷಕರು ರೂಪಿಸಿದ ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂಪಕರು, ಸಂಸ್ಕೃತಿಯ ಸಮಾನತೆ ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.