ಶೃಂಗೇರಿ: ‘ಶಿಕ್ಷಣದ ಜೊತೆಗೆ ಸುಸಂಸ್ಕೃತ ಮನೋಭಾವ ಬೆಳೆಸಿಕೊಂಡರೆ ಮಾತ್ರ ದೇಶದ ಉನ್ನತಿ ಸಾಧ್ಯ. ಡಾ.ರಾಧಕೃಷ್ಣನ್ ಹಾಗೂ ಡಾ.ಅಬ್ದುಲ್ ಕಲಾಂ ಆದರ್ಶವು ಶಿಕ್ಷಕರಿಗೆ ಮಾದರಿಯಾಗಬೇಕು’ ಎಂದು ಕರ್ಣಾಟಕ ಬ್ಯಾಂಕ್ ಸಿ.ಇ.ಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್ ಮಹಾಬಲೇಶ್ವರ್ ಹೇಳಿದರು.
ಶೃಂಗೇರಿ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ಸೋಮವಾರ ಹಳೇ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ‘ಗುರುನಮನ’ ಉದ್ಘಾಟಿಸಿ ಅವರು ಮಾತನಾಡಿದರು.
‘ತಂತ್ರಜ್ಞಾನದ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬಹುದು. ಆದರೆ ವಿದ್ಯಾರ್ಥಿಗಳ ಜ್ಞಾನದಾಹ ತಣಿಸಲು ಶಿಕ್ಷಕರು ಬೇಕು. ವಿದ್ಯಾರ್ಥಿಗಳು ದೇಶಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು’ ಎಂದರು.
ಉದ್ಯಮಿ ಎಂ.ಆರ್ ಸುರೇಶ್ ಮಾತನಾಡಿ, ‘ತಪ್ಪು ಮಾಡಿದಾಗ ಸರಿ ದಾರಿ ತೋರುವ ಶಿಕ್ಷಕರು ಸಮಾಜದ ಏಳಿಗೆಗೆ ಕಾರಣರಾಗಿದ್ದಾರೆ. ಸಮಕಾಲೀನ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು’ ಎಂದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮಾತನಾಡಿ, `ಶಿಕ್ಷಕರು ಮೌಲ್ಯಧಾರಿತ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಹಳೇ ವಿದ್ಯಾರ್ಥಿ ಸಂಘಕ್ಕೆ ಕರ್ಣಾಟಕ ಬ್ಯಾಂಕ್ನಿಂದ ₹2 ಲಕ್ಷ, ಉದ್ಯಮಿ ಎಂ.ಆರ್. ಸುರೇಶ್ ₹2.5 ಲಕ್ಷ, ಸಾಗರದ ವೈದೈ ಡಾ.ನಳಿನ ಆರ್. ಭಾಗವತ್ ₹1 ಲಕ್ಷ ದೇಣಿಗೆ ನೀಡಿದರು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗಳಾದ ಅನು ಆರ್, ಸಂಜನಾ ಎಂ.ಆರ್ ಅವರನ್ನು ಮತ್ತು ಹಳೇ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು.
ಸಂಘದ ಗೌರವ ಅಧ್ಯಕ್ಷ ಕೆ.ಎಂ ಶ್ರೀನಿವಾಸ್, ಪ್ರಾಚಾರ್ಯ ಡಾ.ಎಂ ಸ್ವಾಮಿ, ಡಾ.ನಳಿನ ಆರ್ ಭಾಗವತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.