ADVERTISEMENT

ಪ್ರವಾಸೋದ್ಯಮ ಇಲಾಖೆಗೆ ಸೇರಿಸುವ ಪ್ರಸ್ತಾವಕ್ಕೆ ವಿರೋಧ

ಕೆಮ್ಮಣ್ಣುಗುಂಡಿ ಶ್ರೀಕೃಷ್ಣ ರಾಜೇಂದ್ರ ಗಿರಿಧಾಮ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 6:16 IST
Last Updated 11 ಅಕ್ಟೋಬರ್ 2020, 6:16 IST
ತರೀಕೆರೆ ತಾಲ್ಲೂಕಿನ ಕೆಮ್ಮಣ್ಣುಗುಂಡಿ ಗಿರಿಧಾಮ ರಮಣೀಯ ದೃಶ್ಯ
ತರೀಕೆರೆ ತಾಲ್ಲೂಕಿನ ಕೆಮ್ಮಣ್ಣುಗುಂಡಿ ಗಿರಿಧಾಮ ರಮಣೀಯ ದೃಶ್ಯ   

ತರೀಕೆರೆ: ಜಿಲ್ಲೆಯ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಶ್ರೀಕೃಷ್ಣ ರಾಜೇಂದ್ರ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿಸುವ ಪ್ರಸ್ತಾವ ಸರ್ಕಾರದ ಮುಂದಿದ್ದು, ಇದನ್ನು ವಿರೋಧಿಸುವುದಾಗಿ ಪ್ರವಾಸಿಗರು ಹಾಗೂ ಪರಿಸರವಾದಿಗಳು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಇಲ್ಲಿನ ಕೃಷ್ಣ ರಾಜೇಂದ್ರ ಗಿರಿಧಾಮವನ್ನು 1932ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರವರು ಆರಂಭಿಸಿದ್ದರು. ಮೈಸೂರು ಸಂಸ್ಥಾನವು ಈ ಗಿರಿಧಾಮವನ್ನು1942ರಲ್ಲಿ ತೋಟಗಾರಿಕೆ ಇಲಾಖೆ ಅಧೀನಕ್ಕೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿತ್ತು. ಅಲ್ಲಿಂದ ಇಲ್ಲಿಯವರೆಗೆ 78 ವರ್ಷಗಳ ಕಾಲ ಗಿರಿಧಾಮಕ್ಕೆ ಜನಸಾಮಾನ್ಯರು ಭೇಟಿ ನೀಡುತ್ತಿದ್ದರು.

‘ಈ ಗಿರಿಧಾಮವನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿರುವ ಕ್ರಮವನ್ನು ವಿರೋಧಿಸುತ್ತೇವೆ’ ಎಂದು ನಂದಿಬಟ್ಟಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣೆಗೌಡ ಹೇಳಿದ್ದಾರೆ.

ADVERTISEMENT

ಗಿರಿಧಾಮವು ಪ್ರವಾಸೋಧ್ಯಮ ಇಲಾಖೆಗೆ ಸೇರ್ಪಡೆಯಾದರೆ ಬಡ ಪ್ರವಾಸಿಗರು ಬಂದು ಹೋಗುವಂತಿಲ್ಲ. ಶ್ರೀಮಂತರಿಗಷ್ಟೆ ಗಿರಿಧಾಮವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಲಿಂಗದಹಳ್ಳಿಯ ಅಬೂಬಕ್ಕರ್.

‘ಪ್ರವಾಸಿಗರಿಂದ ಸಾಕಷ್ಟು ಆದಾಯವಿದೆ. ಬಡವರ ಊಟಿಯಾಗಿರುವ ಗಿರಿಧಾಮ ಮೂಲ ಇಲಾಖೆಯಲ್ಲಿ ಉಳಿದರೆ ಒಳ್ಳೆಯದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ಯತಿರಾಜ್.

‘ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ಗಿರಿಧಾಮ ಹೋದರೆ ಐಷರಾಮಿ ಕಟ್ಟಡಗಳು ತಲೆಯೆತ್ತಲಿದ್ದು, ಪ್ರಾಚೀನ ಗಿಡ ಮೂಲಿಕೆಗಳು ಹಾಗೂ ವಿವಿಧ ಪ್ರಬೇಧದ ಪಕ್ಷಿ ಸಂಕುಲಗಳು ನಾಶ ಹೊಂದಲಿವೆ’ ಎಂಬುದು ಇಲ್ಲಿನ ಪರಿಸರವಾದಿಗಳ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.