ಕೊಪ್ಪ: ‘ಶೃಂಗೇರಿ ಕ್ಷೇತ್ರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ದ್ವೇಷದ ರಾಜಕಾರಣ, ಷಡ್ಯಂತ್ರ ನಡೆಯುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಚ್.ಎಂ.ಸತೀಶ್ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013ರಲ್ಲಿ ರಾಜೇಗೌಡ ಅವರು, ಅಲ್ಪ ಮತಗಳಿಂದ ಸೋತಿದ್ದರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅಂದು ರಾಜೇಗೌಡರು ಜೀವರಾಜ್ ವಿರುದ್ಧ ದ್ವೇಷದ ರಾಜಕಾರಣ ಮಾಡಿರಲಿಲ್ಲ. 2018ರಲ್ಲಿ ರಾಜೇಗೌಡರು ಗೆದ್ದರು. ಆ ನಂತರದಲ್ಲಿ ಬಿಜೆಪಿ ಮುಖಂಡರು ರಾಜೇಗೌಡರ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಾ ಅಭಿವೃದ್ಧಿಗೆ ಅಡ್ಡಿಪಡಿಸುತ್ತಾ ಬಂದಿದ್ದಾರೆ’ ಎಂದು ದೂರಿದರು.
ಕ್ಷೇತ್ರದ ಜನರು 2023ರಲ್ಲಿ ರಾಜೇಗೌಡ ಅವರನ್ನು ಪುನರ್ ಆಯ್ಕೆ ಮಾಡಿದರು. ಆ ಸಂದರ್ಭದಲ್ಲಿ ಬಿಜೆಪಿಗರು ಪುನಃ ಆರೋಪ ಆರಂಭಿಸಿದರು. ರಾಜೇಗೌಡರ ಆಸ್ತಿ ವಿಚಾರವಾಗಿ ಬಿಜೆಪಿ ಮಂಡಲ ಅಧ್ಯಕ್ಷ ಹೊಸೂರ್ ದಿನೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದೀಗ ಎಫ್ಐಆರ್ ದಾಖಲಿಸಲು ನಿರ್ದೇಶನವಾಗಿದೆ. ಈಗ ಇಲ್ಲದ ಕಡತಗಳನ್ನು ಸೃಷ್ಟಿ ಮಾಡಿ ಕೇಸು ದಾಖಲಿಸಲು ದಿನೇಶ್ ಸಫಲರಾಗಿದ್ದಾರೆ, ಅಂತಿಮವಾಗಿ ಅವರು ವಿಫಲರಾಗುತ್ತಾರೆ ಎಂದರು.
ಹಲಸೂರಿನ ಎಸ್ಟೇಟ್ ಬಗ್ಗೆ ₹200 ಕೋಟಿ ಎಲ್ಲಿಂದ ಬಂತು ಎಂದು ಜೀವರಾಜ್ ಪ್ರಶ್ನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿದ್ದಾರ್ಥ್ ಹೆಗ್ಡೆ ಕುಟುಂಬ ಆದಾಯ ತೆರಿಗೆ ಇಲಾಖೆ, ಇ.ಡಿಗೆ ದಾಖಲೆ ಸಲ್ಲಿಸುವ ಕೆಲಸ ಮಾಡಿದ್ದಾರೆ. ರಾಜೇಗೌಡರು ಆಡಳಿತ ವ್ಯವಸ್ಥೆ ಒಳಗೆ ಯಾವುದೇ ಲೋಪದೋಷಗಳಿಲ್ಲದೆ ಕೋರ್ಟ್ಗೆ ಮಾಹಿತಿ ನೀಡಲು ಬದ್ಧರಾಗಿದ್ದಾರೆ ಎಂದು ತಿಳಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರದ ಶಾಸಕರ ಫಲಿತಾಂಶ ಪ್ರಕಟವಾಗಿತ್ತು. ಅಂದು ಜೀವರಾಜ್ ಅವರು ಮತ ಎಣಿಕೆ ಸರಿಯಾಗಿಲ್ಲ ಎಂದು ಆಕ್ಷೇಪಿಸಿದ್ದರಿಂದ ಮರು ಮತ ಎಣಿಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ, ಮೊದಲಿಗಿಂತಲೂ ಹೆಚ್ಚು ಮತಗಳಿಂದ ರಾಜೇಗೌಡರು ಗೆಲುವು ಸಾಧಿಸಿದ್ದರು. ಆ ನಂತರವೂ ಮತ ಎಣಿಕೆ ಸರಿಯಾಗಿಲ್ಲ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ರಾಜೇಗೌಡರು ಆಡಳಿತದ ಬಗ್ಗೆ ಗಮನ ನೀಡದಂತೆ ಮಾಡಿ ಕೋರ್ಟ್ ಮುಂದೆ ನಿಲ್ಲಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ನಾನು ಶಾಸಕನಾಗುತ್ತೇನೆ ಎಂದು ಜೀವರಾಜ್ ಕನಸು ಕಾಣುತ್ತಿದ್ದಾರೆ, ಅದು ಎಂದಿಗೂ ನನಸಾಗುವುದಿಲ್ಲ ಎಂದರು.
ರಾಜೇಗೌಡರು ರಾಜಕೀಯಕ್ಕೆ ಬಂದಾಗ ಅವರ ಕುಟುಂಬದ ಜಮೀನು 1 ಸಾವಿರ ಎಕರೆಯಷ್ಟಿತ್ತು. ಈಗ ಎಷ್ಟಿದೆ ಎಂದು ಯಾರು ಬೇಕಾದರೂ ಪರಿಶೀಲಿಸಬಹುದು. ಆದರೆ, ಜೀವರಾಜ್ ಅವರು ಶಾಸಕರಾಗುವ ಮುನ್ನ ಎಷ್ಟು ಆಸ್ತಿ ಇತ್ತು ಈಗ ಎಷ್ಟಾಗಿದೆ ಹಾಗೂ ದಿನೇಶ್ ಹೊಸೂರ್ ಆಸ್ತಿ ಎಷ್ಟಿತ್ತು ಈಗ ಎಷ್ಟಾಗಿದೆ ಎಂದು ಸಾರ್ವಜನಿಕವಾಗಿ ಚರ್ಚೆಯಾಗಲಿ ಎಂದು ಸವಾಲು ಹಾಕುತ್ತೇನೆ ಎಂದು ಅವರು ಹೇಳಿದರು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್, ಬಗರ್ ಹುಕುಂ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಕೆಡಿಪಿ ಸದಸ್ಯ ಬಿ.ಪಿ.ಚಿಂತನ್ ಬೆಳಗೊಳ, ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಮುಖಂಡ ಕೀರ್ತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.