ADVERTISEMENT

‘ಕೂಲಿ ಕಾರ್ಮಿಕರ ಮಗ ಜಿಲ್ಲೆಗೆ ಪ್ರಥಮ’

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 5:05 IST
Last Updated 19 ಜೂನ್ 2022, 5:05 IST
ಮಧು
ಮಧು   

ಅಜ್ಜಂಪುರ: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ತಾಲ್ಲೂಕಿನ ಅಂತರಘಟ್ಟೆಯ ನಂದೀಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಧು 570 ಅಂಕ ಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಧು, ಕನ್ನಡ, ಅರ್ಥಶಾಸ್ರ, ರಾಜ್ಯ ಶಾಸ್ತ್ರದಲ್ಲಿ ತಲಾ 100 ಅಂಕ ಪಡೆದಿದ್ದಾರೆ.

ಅಂತರಘಟ್ಟೆ ಗ್ರಾಮದ ವಿದ್ಯಾನಗರ ನಿವಾಸಿ ಕೂಲಿ ಕಾರ್ಮಿಕ ಕರಿಯಪ್ಪ ಮತ್ತು ಕರಿಯಮ್ಮ ದಂಪತಿಯ ಪುತ್ರ. ಬಡತನದ ನಡುವೆಯೂ ಓದಿನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಎಸ್ಎಸ್ಎಲ್ಸಿಯಲ್ಲಿಯೂ ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದ ಇವರು, ವಿದ್ಯಾರ್ಥಿ ವೇತನದಿಂದಲೇ ಒದಿ, ಸಾಧನೆ ಮಾಡಿದ್ದಾರೆ.

‘ಒದಲು ಮನೆಯಲ್ಲಿ ಪೋಷಕರು ಸಹಕಾರ ನೀಡಿದರು. ಕಾಲೇಜಿನಲ್ಲಿ ಉತ್ತಮ ಉಪನ್ಯಾಸ ಸಿಕ್ಕಿತು. ಮನೆಯಲ್ಲಿ ನಿತ್ಯ ಕನಿಷ್ಠ 8-10 ಗಂಟೆ ಓದುತ್ತಿದ್ದೆ. ಇದು ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ಎಚ್ಇಪಿ ವಿಭಾಗದಲ್ಲಿ ಪದವಿ ಪಡೆಯಬೇಕು, ಮುಂದೆ ಐಎಎಸ್ ಮಾಡಬೇಕು ಎಂಬ ಆಸೆ ಇದೆ’ ಎಂದು ಮಧು ಪತ್ರಿಕೆಗೆ ತಿಳಿಸಿದರು.

ADVERTISEMENT

ಕಾಲೇಜು ಪ್ರಾಂಶುಪಾಲ ರಾಮಚಂದ್ರಪ್ಪ ಮಾತನಾಡಿ, ‘ಮಧು, ಬಡ ಅಲೆಮಾರಿ ಕುಟುಂಬದಿಂದ ಬಂದವ. ಪ್ರತಿಭಾನ್ವಿತ ವಿದ್ಯಾರ್ಥಿ. ಆರ್ಥಿಕ ಸಹಕಾರ ದೊರೆತರೆ ಆತ, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.