ತರೀಕೆರೆ: ಜನಸಾಮಾನ್ಯರ ಜೀವನಾವಶ್ಯಕತೆಗೆ ಕಾನೂನು ಅರಿವು ಅನಿವಾರ್ಯ ಎಂದು ನ್ಯಾಯಾಧೀಶ ವೈದ್ಯ ಶ್ರೀಕಾಂತ್ ತಿಳಿಸಿದರು.
ಇಲ್ಲಿಗೆ ಸಮೀಪದ ಗೋಪಾಲ ಕಾಲೊನಿ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತರೀಕೆರೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಗೋಪಾಲ ಕಾಲೊನಿ ಸಹಯೋಗದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಕುರಿತಾದ ‘ಕಾನೂನುಗಳ ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನಿನ ಮಾಹಿತಿ ಕೊರತೆಯಿಂದ ಹಕ್ಕು ಚ್ಯುತಿ ಆಗಬಾರದೆಂದು ತಿಳಿಸಿ, ಕಾನೂನಿನ ಕನಿಷ್ಠ ಜ್ಞಾನವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ವಕೀಲ ಎಸ್. ಸುರೇಶ್ ಚಂದ್ರ ಮಾತನಾಡಿ, ‘ಕಾನೂನಿನ ಅರಿವಿಲ್ಲದೆ ಮಾಡಿದ ತಪ್ಪಿಗೆ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲವೆಂದು ತಿಳಿಸಿ, ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಆಸ್ತಿಯ ಹಕ್ಕುಗಳ ಕುರಿತಾದ ಕಾನೂನುಗಳು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ದೊರೆಯಬಹುದಾದ ಸೇವೆಗಳ ಕುರಿತು’ ಮಾಹಿತಿ ನೀಡಿದರು.
ವಕೀಲ ಎಂ.ಕೆ. ತೇಜಮೂರ್ತಿ, ಹಿರಿಯ ನಾಗರಿಕರಿಗೆ ಕಾನೂನಿನ ಅಡಿಯಲ್ಲಿ ಇರುವ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.
ಮಾದಕ ವಸ್ತುಗಳಿಂದ ಉಂಟಾಗುತ್ತಿರುವ ತೊಂದರೆಗಳು, ಅದನ್ನು ತಡೆಯಲು ಪೋಷಕರು ವಹಿಸಬೇಕಾದ ಮುಂಜಾಗ್ರತಾ ಕ್ರಮ ಹಾಗೂ ವಿಲ್ ಬರೆಯುವ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ವಕೀಲ ಎಲ್. ವೀರಭದ್ರಪ್ಪ ಮಾಹಿತಿ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ವಿ. ದಿನೇಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಪರ ಸರ್ಕಾರಿ ವಕೀಲ ಟಿ.ಜೆ. ಜಗದೀಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಸದಸ್ಯೆ ಭಾಗ್ಯ ಇದ್ದರು. ದಿನೇಶ್ ಕುಮಾರ್ ಸ್ವಾಗತಿಸಿದರು. ಶಶಿಧರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.