ತರೀಕೆರೆ: ಸರ್ಕಾರವು ಪೌರಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ನೀಡುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯ ತರೀಕೆರೆ ಎನ್. ವೆಂಕಟೇಶ್ ಹೇಳಿದರು.
ಅವರು ಪಟ್ಟಣದ ಕನಕ ಕಲಾ ಭವನದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕರ ಕುಂದು ಕೊರತೆ ಮತ್ತು ಗೃಹ ಭಾಗ್ಯ ಮನೆಯ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಹಲವಾರು ವರ್ಷಗಳ ಹೋರಾಟದ ಫಲವಾಗಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ತರೀಕೆರೆ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ 16 ಮನೆಗಳನ್ನು ಪುರಸಭೆಯಿಂದ ನಿರ್ಮಿಸಿದ್ದು, ಫಲಾನುಭವಿಗಳಿಗೆ, ಪೌರಕಾರ್ಮಿಕರು ಗೃಹ ಭಾಗ್ಯ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು.
ಪುರಸಭಾ ಮುಖ್ಯಾಧಿಕಾರಿ ಎಚ್. ಪ್ರಶಾಂತ್ ಮಾತನಾಡಿ, ಸಪಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ವೆಂಕಟೇಶ್ ರವರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಹಾಗೂ ಉಪ ವಿಭಾಗ ಅಧಿಕಾರಿಗಳ ಸಭೆಗಳಲ್ಲಿ ಜಿಲ್ಲೆಯ ಎಲ್ಲಾ ಪೌರಕಾರ್ಮಿಕರ ಪರವಾಗಿ ಸರ್ಕಾರದಿಂದ ಸಿಗುವ ಸೌಲತ್ತುಗಳ ಬಗ್ಗೆ ಚರ್ಚೆ ಮಾಡಿ ಧ್ವನಿ ಎತ್ತುತ್ತಾರೆ. ಆದ್ದರಿಂದ ಪೌರಕಾರ್ಮಿಕರು ಜಾಗೃತರಾಗಬೇಕು. ನಿಮ್ಮ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತ ಪ್ರವೇಶವಿದ್ದು, ಈ ಕುರಿತು ಹೋರಾಟ ಮಾಡುತ್ತಿದ್ದಾರೆ. ಎಲ್ಲಾ ಪೌರಕಾರ್ಮಿಕರು ನಿಮ್ಮ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪರಿಸರ ಅಭಿಯಂತರರಾದ ತಹೆರಾ ತಸ್ಲೀಮ್, ಸಮುದಾಯ ಸಂಘಟನಾ ಅಧಿಕಾರಿ ಪ್ರಸನ್ನಕುಮಾರ್, ಆರೋಗ್ಯ ನಿರೀಕ್ಷಕ ಸಂಪತ್ತು, ದ್ವಿತೀಯ ದರ್ಜೆ ಸಹಾಯಕ ಮನೋಹರ್, ಜ್ಯೋತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.