ಮೂಡಿಗೆರೆ: ನಾವು ನಿರ್ವಹಿಸುವ ಕೆಲಸದಲ್ಲಿ ತೋರಿಸುವ ಕರ್ತವ್ಯ ನಿಷ್ಠೆಯು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ಎಂಜಿನಿಯರ್ ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಿದರಹಳ್ಳಿಯಲ್ಲಿರುವ ಕೆಎಸ್ಆರ್ಟಿಸಿ ಘಟಕದಲ್ಲಿ ಮೂರು ತಿಂಗಳಿನಲ್ಲಿ ಗರಿಷ್ಠ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹುದ್ದೆಯಲ್ಲಿ ಯಾವುದು ಮೇಲಲ್ಲ, ಯಾವುದು ಕೀಳಲ್ಲ. ಯಾರು ತಮಗೆ ದೊರೆತ ಹುದ್ದೆಯಲ್ಲಿ ಕರ್ತವ್ಯ ನಿಷ್ಠೆಯನ್ನು ಅಳವಡಿಸಿಕೊಂಡು ಆ ಸ್ಥಾನಕ್ಕೆ ನ್ಯಾಯ ಒದಗಿಸಿಕೊಡುತ್ತಾರೋ ಅಂತಹ ವ್ಯಕ್ತಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತೆರಳುತ್ತಾರೆ. ಕಾಯಕ ನಿಷ್ಠೆಯನ್ನು ಬಸವಣ್ಣನ ಕಾಲದಲ್ಲಿಯೇ ಹೇಳಲಾಗಿದ್ದು, ಇಂದಿಗೂ ಅದು ಸತ್ಯವಾಗಿದೆ. ಪ್ರತಿಯೊಬ್ಬರೂ ತಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಸಂಸ್ಥೆಗೆ ಉತ್ತಮ ಸೇವೆ ಸಲ್ಲಿಸಬೇಕು’ ಎಂದರು.
ಸಹಾಯಕ ಆಡಳಿತಾಧಿಕಾರಿ ಶಿವಪ್ರಸಾದ್ ಮಾತನಾಡಿ, ‘ಕೆಎಸ್ಆರ್ಟಿಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವುದೇ ಹೆಮ್ಮೆಯ ಸಂಗತಿಯಾಗಿದೆ. ನಿತ್ಯವೂ ಸಾವಿರಾರು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕರೆದೊಯ್ಯುವುದು ಪುಣ್ಯದ ಕಾರ್ಯವಾಗಿದೆ. ಅದರಲ್ಲೂ ವೃದ್ಧರು, ರೋಗಿಗಳು, ವಿದ್ಯಾರ್ಥಿಗಳು, ಅಬಲರಿಗೆ ನೀಡುವ ಸೇವೆಯು ಭಗವಂತನಿಗೆ ಮಾಡಿದ ಪೂಜೆಗಿಂತಲೂ ಶ್ರೇಷ್ಠವಾಗುತ್ತದೆ. ಪ್ರತಿಯೊಬ್ಬರೂ ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಇನ್ನಷ್ಟು ಸಾಧನೆ ಮಾಡಬೇಕು’ ಎಂದರು.
ಮೂರು ತಿಂಗಳಿನಲ್ಲಿ ಅತಿ ಹೆಚ್ಚು ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ ದಶರಥ, ರಾಜೇಗೌಡ, ರಾಮಗೊಂಡಬಿರದಾರ, ವೆಂಕನಗೌಡ, ಸಿದ್ದೇಶ್, ಸುನೀಲ್ ಜಂಗಮಶೆಟ್ಟಿ ಅವರನ್ನು ಗೌರವಿಸಲಾಯಿತು. ಘಟಕ ವ್ಯವಸ್ಥಾಪಕ ಪ್ರಭು, ಅಧೀಕ್ಷಕ ಸತೀಶ್ ಮಾತನಾಡಿದರು. ಸಿಬ್ಬಂದಿ ಅರ್ಚನಾ, ನಂದೀಶ್, ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.