ಮೂಡಿಗೆರೆ: ‘ಕನ್ನಡ ಭಾಷೆಯನ್ನು ನಿತ್ಯ ಬಳಸುವುದರಿಂದ ಮಾತ್ರ ಭಾಷೆ ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್. ನಾಗರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಬಿಳಗುಳದಲ್ಲಿರುವ ಕಾಫಿನಾಡು ಸಮಾಜ ಸೇವಕ ಸಂಘದ ಹಸೈನಾರ್ ಬಿಳಗುಳ ಅವರ ಮನೆಯಂಗಳದಲ್ಲಿ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಹಾಗೂ ಕಾಫಿ ನಾಡು ಸಮಾಜ ಸೇವಾ ಸಂಘ ವತಿಯಿಂದ ಏರ್ಪಡಿಸಿದ್ದ ‘ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಭಾಷೆಯ ಬೆಳವಣಿಗೆ ಹಾಗೂ ಉಳಿವಿಗೆ ವಿಶೇಷ ಕಾರ್ಯಕ್ರಮ ರೂಪಿಸುವ ಅಗತ್ಯವಿಲ್ಲ. ಯಾವುದೇ ಅಂಜಿಕೆ, ಕೀಳಿರಿಮೆಯಿಲ್ಲದೇ ಭಾಷೆಯನ್ನು ಬಳಸುವ ಮನೋಭಾವ ರೂಢಿಸಿಕೊಂಡರೆ ಭಾಷೆ ತಾನಾಗಿಯೇ ಬೆಳೆಯುತ್ತದೆ. ಕನ್ನಡದಲ್ಲಿ ಮಾತನಾಡಿದರೆ ಕೀಳಾಗಿ ಕಾಣುತ್ತಾರೆ ಎಂಬ ಮನೋಭಾವ ತೊಡೆದು ಹಾಕಬೇಕು’ ಎಂದರು.
ಪತ್ರಕರ್ತ ಅಮರನಾಥ್ ಮಾತನಾಡಿ, ‘ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಕಂಪ್ಯೂಟರ್, ಮೊಬೈಲ್ ಫೋನ್ಗಳಲ್ಲಿ ಕನ್ನಡ ಭಾಷೆಯಿದ್ದರೂ ಅದನ್ನು ಬಳಸುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ’ ಎಂದರು.
ಉದ್ಯಮಿ ಕೆ. ಮಂಚೇಗೌಡ ಉದ್ಘಾಟಿಸಿದರು. ತೇಜಸ್ವಿಯವರ ಕರ್ವಾಲೋ ಕೃತಿಯ ಬಗ್ಗೆ ಸಾಹಿತಿ ನಂದೀಶ್ ಬಂಕೇನಹಳ್ಳಿ ಕಥಾ ನಿರೂಪಣೆ ಮಾಡಿದರು. ಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆಗಳ ವಾಚನ ಕಾರ್ಯಕ್ರಮ ನಡೆಸಲಾಯಿತು.
ಕಾಫಿನಾಡು ಸಮಾಜ ಸೇವಕರ ಸಂಘದ ಅಧ್ಯಕ್ಷ ಹಸೈನಾರ್ ಬಿಳಗುಳ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಬಿ.ಆರ್. ನವೀನ್ ರಮ್ಯಾ ಶ್ರೀ ಹಿರೇಶೀಗರ, ಮಗ್ಗಲಮಕ್ಕಿ ಗಣೇಶ್, ನವೀನ್ ಆನೆದಿಬ್ಬ, ರವಿಕುನ್ನಹಳ್ಳಿ, ಬಕ್ಕಿ ಮಂಜುನಾಥ್, ಬಿ.ಆರ್.ಬಾಲಕೃಷ್ಣ, ಎಚ್.ಎಂ. ಶಾಂತಕುಮಾರ್, ಸಾಹಿತಿ ಡಿ.ಎಂ. ಮಂಜುನಾಥ್ ಸ್ವಾಮಿ, ವಸಂತ್ ಹಾರ್ಗೋಡು, ದೀಕ್ಷಾ ನಂದೀಶ್, ದಾಕ್ಷಾಯಿಣಿ, ವಿದ್ಯಾ, ಎಚ್.ಎಂ. ಇಂಪಾ, ಜಗದೀಶ್, ಜ್ಯೋತಿ ಸಾಲ್ಡಾನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.