ನರಸಿಂಹರಾಜಪುರ: ‘ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲಿ ಎಂಬ ಕಾರಣಕ್ಕೆ ಬೇಸಿಗೆ ಶಿಬಿರದಲ್ಲಿ ಮೆಟ್ರಿಕ್ ಮೇಳ ಆಯೋಜಿಸಲಾಗಿದೆ’ ಎಂದು ರಾಗಮಯೂರಿ ಅಕಾಡೆಮಿ ನಿರ್ದೇಶಕಿ ಅಂಕಿತ ಪ್ರಜ್ವಲ್ ಹೇಳಿದರು.
ಪಟ್ಟಣದ ಅಗ್ರಹಾರದ ಅನ್ನಪೂರ್ಣಮ್ಮ ರಂಗನಾಥ ಸಭಾಂಗಣದಲ್ಲಿ ಸೋಮವಾರ ರಾಗಯಮೂರಿ ಅಕಾಡೆಮಿ ಆಯೋಜಿಸಿರುವ 10 ದಿನಗಳ ಬೇಸಿಗೆ ಶಿಬಿರದಲ್ಲಿ 3ನೇ ದಿನ ಮಕ್ಕಳಿಗಾಗಿ ನಡೆದ ‘ಮೆಟ್ರಿಕ್ ಮೇಳದ ಸಮಾರೋಪ ಸಮಾರಂಭ’ದಲ್ಲಿ ಅವರು ಮಾತನಾಡಿದರು.
ಮಕ್ಕಳ ಸಂತೆಯಲ್ಲಿ 3 ಗುಂಪುಗಳಾಗಿ ಮಾಡಲಾಗಿದ್ದು, ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು, ಸಿಹಿ ಹಾಗೂ ಕಾರ ತಿಂಡಿಗಳು, ಜ್ಯೂಸ್, ಮಾವಿನ ಕಾಯಿ ತಂದು ಮಾರಾಟ ಮಾಡಿದ್ದಾರೆ. ಇದರಿಂದ ಮಕ್ಕಳಿಗೆ ವಸ್ತುಗಳನ್ನು ಹೇಗೆ ಮಾರಾಟ ಮಾಡಬೇಕು ಎಂಬ ಜ್ಞಾನ ಸಿಕ್ಕಿದೆ ಎಂದರು.
ಪೋಷಕಿ ನಂದಿನಿ ಆಲಂದೂರು ಮಾತನಾಡಿ, ಮಕ್ಕಳ ಸಂತೆ ಉತ್ತಮ ಕಾರ್ಯಕ್ರಮವಾಗಿದೆ. ಮಕ್ಕಳಲ್ಲಿ ವ್ಯವಹಾರ ಜ್ಞಾನ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಹಣಕಾಸಿನ ವ್ಯವಹಾರ ಮಾಡಲು ತರಬೇತಿ ಸಿಕ್ಕಿದೆ ಎಂದರು.
ಪೋಷಕರಾದ ಅಭಿನವ ಗಿರಿರಾಜ್, ಸುಧಾಕರ್ ಮಾತನಾಡಿದರು. ಮಕ್ಕಳ ಸಂತೆಯಲ್ಲಿ ಭಾಗವಹಿಸಿದ್ದ ಮಕ್ಕಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.