
ಶೆಟ್ಟಿಕೊಪ್ಪ(ನರಸಿಂಹರಾಜಪುರ): ‘ಮಕ್ಕಳಿಗೆ ವಿದ್ಯಾರ್ಥಿ ದಿಸೆಯಲ್ಲಿಯೇ ಶಿಕ್ಷಣದ ಜತೆ ಸಂಸ್ಕಾರವನ್ನು ನೀಡಿದಾಗ ಉತ್ತಮ ನಾಗರಿಕರಾಗಬಲ್ಲರು. ಸಂಸ್ಕಾರದಿಂದ ಪರಿವರ್ತನೆ ಸಾಧ್ಯವಾಗಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಹೇಳಿದರು.
ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲ್ಲಿಗೆ ಸಂಸ್ಕಾರ ಸಿಕ್ಕಾಗ ಅದು ಶಿಲೆಯಾಗುತ್ತದೆ. ಮಣ್ಣಿಗೆ ಸಂಸ್ಕಾರ ಸಿಕ್ಕಾಗ ಅದು ಮಡಿಕೆಯಾಗುತ್ತದೆ. ಸಗಣಿಗೆ ಸಂಸ್ಕಾರ ಸಿಕ್ಕಾಗ ಅದು ವಿಭೂತಿಯಾಗುತ್ತದೆ. ನೀರಿಗೆ ಸಂಸ್ಕಾರ ಸಿಕ್ಕಾಗ ಅದು ತೀರ್ಥವಾಗುತ್ತದೆ. ಮನುಷ್ಯನಿಗೆ ಸಂಸ್ಕಾರ ಸಿಕ್ಕಾಗ ಆತ ಮಹಾನ್ ದೇವನಾಗಬಲ್ಲ. ಸಂಸ್ಕಾರಕ್ಕೆ ಅಂತಹ ಶಕ್ತಿಯಿದ್ದು, ವಿದ್ಯಾರ್ಥಿಗಳಿಗೆ ಅಂತಹ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆಯಿದೆ ಎಂದರು.
ಸರ್ಕಾರಿ ಶಾಲೆಗಳ ಕಾರ್ಯಕ್ರಮ ವಿನೂತನ ಹಾಗೂ ವಿಭಿನ್ನವಾಗಿದೆ. ಸರ್ಕಾರಿ ಶಾಲೆ ಎಂದರೆ ಅದು ನನ್ನದು, ನನ್ನ ಸ್ವತ್ತು ಎಂಬ ಅಭಿಮಾನ ಮೂಡಬೇಕು. ಕಲಿಕೆಗೆ ಪೋಷಕರ ಸಹಕಾರ ಸಿಗಬೇಕು. ಶಾಲೆಗಳ ಉಳಿವು ಮತ್ತು ಅಸ್ತಿತ್ವಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಶಾಲೆಗಳ ಉಳಿವಿಗೆ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಪೋಷಕರು ಹಾಗೂ ಗ್ರಾಮಸ್ಥರು ಭದ್ರಬುನಾದಿ ಹಾಕಬೇಕು. ಸರ್ಕಾರ ಪ್ರಸ್ತುತ ನೀಡುತ್ತಿರುವ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಬಿಸಿಯೂಟದ ಜತೆಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ನೋಟ್ ಪುಸ್ತಕವನ್ನು ಉಚಿತವಾಗಿ ನೀಡಲಿದೆ ಎಂದರು.
ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಸದರಿ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅನುಭವಿ ಹಾಗೂ ನುರಿತ ಶಿಕ್ಷಕರಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಗ್ರಾಮ ಪಂಚಾಯಿತಿಯಿಂದಲೂ ಶಾಲೆಗೆ ಹೆಚ್ಚಿನ ಅನುದಾನ ನೀಡಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಮೂಲ ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಯಿಂದ ವಿಶೇಷ ಅನುದಾನ ನೀಡಲಾಗಿದೆ. ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳು ಪ್ರಗತಿ ಸಾಧಿಸುತ್ತಿವೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ ಮಾತನಾಡಿ, ಶಾಲೆ ಎಂಬುದು ದೇವಾಲಯವಿದ್ದಂತೆ. ಇಲ್ಲಿ ಸೇವೆ ಸಲ್ಲಿಸುವ ಶಿಕ್ಷಕರನ್ನು ಪ್ರತಿಯೊಬ್ಬರು ಗೌರವಿಸಬೇಕು. ಮಕ್ಕಳ ಕಲಿಕೆ ಪೂರಕವಾಗಿ ಪೋಷಕರು ಸಹಕರಿಸಬೇಕು ಎಂದರು.
ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಹಿಂದಿನ ಶಾಲಾ ಶಿಕ್ಷಣಕ್ಕೂ ಇಂದಿನ ಶಾಲಾ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ವಿದ್ಯಾರ್ಥಿಗಳು ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಪ್ರತಿಫಲ ಸಿಗಲಿದೆ. ಈ ಶಾಲೆ ಆರಂಭವಾಗಿ 75 ವರ್ಷ ಪೂರ್ಣಗೊಳ್ಳಲಿದ್ದು ಶೀಘ್ರದಲ್ಲೇ ಎಲ್ಲರ ಸಹಕಾರದಿಂದ ಶಾಲಾ ಅಮೃತ ಮಹೋತ್ಸವ ಆಚರಿಸಲಾಗುವುದು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಎಂ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶೈಲಾ ಮಹೇಶ್, ವಾಣಿ ನರೇಂದ್ರ, ಎ.ಬಿ. ಮಂಜುನಾಥ್, ಪೂರ್ಣಿಮ ಸಂತೋಷ್, ರಾಜ್ಯ ನೌಕರರ ಸಂಘದ ನಿರ್ದೇಶಕ ಬಿ.ಟಿ. ಪ್ರಕಾಶ್, ಅಶೋಕ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಗೀತಾಪ್ರಕಾಶ್, ದಾನಿ ಕೆ.ಎಸ್. ದಿವಾಕರ್ ಗೌಡ, ಸಿಆರ್ಪಿ ತಿಮ್ಮಮ್ಮ, ಬೋಗೇಶ್, ಎಸ್ಡಿಎಂಸಿ ಉಪಾಧ್ಯಕ್ಷೆ ರಾಗಿಣಿ, ತಿಮ್ಮೇಶ್, ಪಿಡಿಒ ವಿಂದ್ಯಾ, ಮುಖ್ಯಶಿಕ್ಷಕಿ ಶಕುಂತಳ, ಶಿಕ್ಷಕರಾದ ಅರುಣ್ ಕುಮಾರ್, ರಾಧಮಣಿ, ಶುಭ ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.