ಮೂಡಿಗೆರೆ: ನಿರುದ್ಯೋಗಿಗಳಿಗೆ ವರದಾನವಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಮಲೆನಾಡಿನಲ್ಲಿ ಉದ್ಯೋಗದೊಂದಿಗೆ ಗ್ರಾಮೀಣ ಪ್ರದೇಶಗಳ ಸೊಬಗಿಗೂ ಕೊಡುಗೆ ನೀಡಿದೆ.
ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯಾನ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ತಾಲ್ಲೂಕಿನಲ್ಲಿ 27 ಉದ್ಯಾನ ನಿರ್ಮಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಆವರಣ ಹಾಗೂ ಶಾಲೆ, ಅಂಗನವಾಡಿ ಆವರಣಗಳಲ್ಲಿ ಉದ್ಯಾನಗಳನ್ನು ನಿರ್ಮಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಆವರಣವು ಖಾಸಗಿ ಶಾಲೆಗಳಿಗಿಂತಲೂ ಮಿಗಿಲಾಗಿ ಕಂಗೊಳಿಸತೊಡಗಿವೆ.
ಶಾಲಾ ಆವರಣಗಳಲ್ಲಿ ಪೌಷ್ಟಿಕ ತೋಟಗಳ ನಿರ್ಮಾಣಕ್ಕೂ ಅವಕಾಶ ಇದೆ. ಶಾಲಾ ಅಂಗಳದಲ್ಲಿ ಹಣ್ಣಿನ ಗಿಡ, ತರಕಾರಿ ಗಿಡ ನೆಟ್ಟು ಪೋಷಿಸಲಾಗುತ್ತಿದ್ದು, ಬಿಸಿಯೂಟಕ್ಕೆ ತಾಜಾ ತರಕಾರಿ ಬಳಕೆ ಸಾಧ್ಯವಾಗುತ್ತಿದೆ.
ನರೇಗಾ ಅಡಿ ದಿನಗೂಲಿ ₹309 ನೀಡುತ್ತಿದ್ದು, ಮಲೆನಾಡಿನಲ್ಲಿ ನಿರುದ್ಯೋಗಿ ಯುವಕರು ಉದ್ಯೋಗ ಖಾತರಿಯತ್ತ ಮುಖ ಮಾಡಿದ್ದಾರೆ.
‘ಉದ್ಯೋಗ ಖಾತರಿಯಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೆಲಸದ ಜಾಗದಲ್ಲಿ ಮಕ್ಕಳ ಪೋಷಣೆ, ನಿರ್ದಿಷ್ಟ ಸಮಯದಲ್ಲಿ ಕೂಲಿ, ನಿಗದಿತ ಸಮಯದಲ್ಲಿ ಕೂಲಿ ಪಾವತಿಯಂತಹ ಸೌಲಭ್ಯಗಳಿವೆ. ಯೋಜನೆಯಲ್ಲಿ ಕೃಷಿ, ತೋಟಗಾರಿಕೆ ಪ್ರದೇಶಗಳ ವಿಸ್ತರಣೆಗೆ ಅವಕಾಶವಿರುವುದರಿಂದ ಜನರು ಯೋಜನೆಯ ಲಾಭ ಪಡೆದು ಆಸ್ತಿಗಳನ್ನು ಸೃಜಿಸಿಕೊಳ್ಳಬಹುದು’ ಎನ್ನುತ್ತಾರೆ ಯೋಜನೆಯ ಸಹಾಯಕ ನಿರ್ದೇಶಕ ಡಿ.ಡಿ ಪ್ರಕಾಶ್.
‘ಮೊದಲು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿದ್ದೆವು. ಲಾಕ್ಡೌನ್ ವೇಳೆ ಊರಿಗೆ ಬಂದಾಗ ನರೇಗಾದಡಿಯಲ್ಲಿ ಕೆಲಸ ಮಾಡಿದೆವು. ಗ್ರಾಮದ ಯುವಕರು ಸೇರಿ ಜಮೀನಿಗೆ ತೆರಳುವ ರಸ್ತೆಯನ್ನುನಿರ್ಮಾಣ ಮಾಡಿಕೊಂಡಿದ್ದೇವೆ. ಗ್ರಾಮಸ್ಥರೇ ಸೇರಿ ಕಸ ವಿಲೇವಾರಿ ಘಟಕ, ಉದ್ಯಾನ ನಿರ್ಮಾಣ ಮಾಡಿದ್ದೇವೆ. ಮತ್ತೆ ಬೆಂಗಳೂರಿಗೆ ಹೋಗುವ ಯೋಚನೆಯನ್ನೇ ಕೈ ಬಿಟ್ಟಿದ್ದೇವೆ’ ಎನ್ನುತ್ತಾರೆ ಹೊಸಳ್ಳಿಯ ಅಕ್ಷಯ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.