ADVERTISEMENT

ನರಸಿಂಹರಾಜಪುರ | ಮೋದಿ ಜನ್ಮದಿನ: ನಿರುದ್ಯೋಗ ದಿನವಾಗಿ ಆಚರಣೆ

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಈಡೇರಿಸದ ಪ್ರಧಾನಿ ಮೋದಿ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:19 IST
Last Updated 19 ಸೆಪ್ಟೆಂಬರ್ 2025, 5:19 IST
ನರಸಿಂಹರಾಜಪುರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಘಟಕದಿಂದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವಾಗಿ ಆಚರಿಸಲಾಯಿತು
ನರಸಿಂಹರಾಜಪುರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಘಟಕದಿಂದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವಾಗಿ ಆಚರಿಸಲಾಯಿತು   

ನರಸಿಂಹರಾಜಪುರ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನಾ ನಿರುದ್ಯೋಗ ನಿವಾರಣೆಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಸುಳ್ಳು ಹೇಳಿ ಯುವಕರಿಗೆ ಮೋಸ ಮಾಡಿದ್ದಾರೆ ಎಂದು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರತನ್ ಗೌಡ ಅರಗಿ ಆರೋಪಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಹುಟ್ಟುಹಬ್ಬವನ್ನು ನಿರುದ್ಯೋಗ ದಿನಾಚರಣೆ ಹಾಗೂ ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗ ಕಡಿಮೆಯಾಗುವ ಬದಲು ಹೆಚ್ಚಾಗಿದೆ ಎಂದರು.

ADVERTISEMENT

ದೇಶದ ಇತಿಹಾಸದಲ್ಲಿ ಚುನಾವಣೆ ಪ್ರಾರಂಭವಾದ ನಂತರ 2009ರವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಐದು ವರ್ಷಕ್ಕೊಮ್ಮೆ ಹೊಸ ಮತದಾರರು ಕನಿಷ್ಠ 1.50 ಕೋಟಿಯಿಂದ ಗರಿಷ್ಠ 3 ಕೋಟಿಯವರೆಗೆ ಏರಿಕೆಯಾಗಿತ್ತು. ಇದರ ಮಧ್ಯೆ 1989ರ ಚುನಾವಣೆಯಲ್ಲಿ 6 ಕೋಟಿ ಹೊಸ ಮತದಾರರು ಮತ ಚಲಾಯಿಸಿದ್ದರು. ಇದಕ್ಕೆ ಕಾರಣ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು ಅದು ಬಿಟ್ಟರೆ 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅಧಿಕಾರಕ್ಕೆ ಬಂದ ನಂತರ ಏಕಾಏಕಿ 13 ಕೋಟಿ ಹೊಸ ಮತದಾರರು ಮತ ಚಲಾಯಿಸಿದ್ದಾರೆ. ಇದು ಹೇಗೆ ಎಂದು ಚುನಾವಣಾ ಆಯೋಗವೇ ತಿಳಿಸಬೇಕು. ಇದಕ್ಕೆ ಬಿಜೆಪಿಯೇ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. 2014ರಿಂದಲೇ ಮತಗಳ್ಳತನ ಮಾಡುತ್ತಾ ಬಂದಿರುವುದು ಇದರಿಂದಲೇ ತಿಳಿಯುತ್ತದೆ ಎಂದು ಆರೋಪಿಸಿದರು.

1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೇಶದಾದ್ಯಂತ 1.82 ಕೋಟಿ ಮತ ಪಡೆದಿತ್ತು. ಅಲ್ಲಿಂದ 25 ವರ್ಷಗಳ ನಂತರ ಅಂದರೆ 2009ರಲ್ಲಿ ಬಿಜೆಪಿ ಪಡೆದಿದ್ದು 7.84 ಕೋಟಿ ಅಂದರೆ ಈ 25 ವರ್ಷದಲ್ಲಿ 6 ಕೋಟಿ ಎರಡು ಲಕ್ಷ ಮತದಾರರನ್ನು ಮಾತ್ರ ಹೆಚ್ಚಿಸಿಕೊಂಡಿತ್ತು. ಆದರೆ ಮೋದಿ ಮತ್ತು ಅಮಿತ್ ಶಾ ಬಂದ ಮೇಲೆ 2014ರ ಲೋಕಸಭಾ ಚುನಾವಣೆಯಲ್ಲಿ 17.17 ಕೋಟಿ ಮತ ಹೆಚ್ಚಳವಾಗಿದ್ದು ಅಂದರೆ ಐದೇ ವರ್ಷಕ್ಕೆ 9 ಕೋಟಿ 33 ಲಕ್ಷ ಮತ ಹೆಚ್ಚಳವಾಗಿದ್ದು ಹೇಗೆ? ಈ ಮತಗಳು ಎಲ್ಲಿಂದ ಬಂದವು ಎಂಬುದೇ ರಾಹುಲ್ ಗಾಂಧಿಯವರ ಪ್ರಶ್ನೆ ಮತ್ತು ಸಾಮಾನ್ಯ ಜನರ ಪ್ರಶ್ನೆಯೇ ಸಹ ಆಗಿದೆ ಎಂದರು.

ಕೊಪ್ಪ ಎಪಿಎಂಸಿ ಅಧ್ಯಕ್ಷ ಎಚ್.ಎಂ.ಶಿವಣ್ಣ ಮಾತನಾಡಿ, ರಾಹುಲ್ ಗಾಂಧಿ ಅವರು ಇವಿಎಂ ಮೂಲಕ ಮತಗಳ್ಳತನ ವಿರುದ್ಧ ಲೋಕಸಭೆಯಲ್ಲಿಯೇ ಧ್ವನಿ ಎತ್ತಿದ್ದಾರೆ. ಬಿಜೆಪಿ ಅವರು ಹಿಂಬಾಗಿಲಿನಿಂದ ಬಂದು ರಾಜಕಾರಣ ಮಾಡಿದೆ ಎಂದು ದೂರಿದರು. ಯುವಕರಿಗೆ 2 ಕೋಟಿ ಉದ್ಯೋಗ ನೀಡದೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರಿಸುವುದು ಕರಾಳ ದಿನವಾಗಿದೆ ಎಂದರು.

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಯುವಕಾಂಗ್ರೆಸ್ ಮುಖಂಡರಾದ ಶ್ರೀಜಿತ್ ಗೌಡ, ಅಭಿಲಾಷ್, ಮಹಮ್ಮದ್ ಕೈದ್, ಮಹಮ್ಮದ್ ಇಲಿಯಾಸ್, ಗೌತಮ್, ನಂದೀಶ, ದೇವರಾಜ್, ನಿತಿನ್, ವಿಜಯ ಮಂಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.