ಕಳಸ: ಇಲ್ಲಿನ ಕುಂಬಳಡಿಕೆಯ ಕುಮಾರಸ್ವಾಮಿ ಬಡಾವಣೆಯ ನಿವಾಸಿಗಳು ನಿವೇಶನದ ಹಕ್ಕುಪತ್ರಕ್ಕಾಗಿ ಇದೇ 27ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಬಡಾವಣೆಯಲ್ಲಿ ಭಾನುವಾರ ನಡೆದ ಬುಡಕಟ್ಟು ಆದಿವಾಸಿ ಸಂಘದ ಜಿಲ್ಲಾ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಶ್ ನೇತೃತ್ವದಲ್ಲಿ ಸಭೆ ನಡೆಯಿತು. ಕುಂಬಳಡಿಕೆಯ ಕುಮಾರಸ್ವಾಮಿ ಬಡಾವಣೆಯಲ್ಲಿ 3 ವರ್ಷಗಳಿಂದ ವಸತಿ ರಹಿತ ಬಡವರು, ಕಾರ್ಮಿಕರು ಗುಡಿಸಲು ನಿರ್ಮಿಸಿ ವಾಸ ಮಾಡುತ್ತಿದ್ದಾರೆ. ಸರ್ವೆ ನಂಬರ್ 153 ಕಂದಾಯ ಭೂಮಿ ಆಗಿದ್ದರೂ, ಬಡವರಿಗೆ ಹಕ್ಕು ಪತ್ರ ನೀಡದಿರುವುದನ್ನು ಖಂಡಿಸಿ ಕಳಸದಲ್ಲಿ ಪ್ರತಿಭಟನೆ ಮತ್ತು ಕಳಸ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸುವ ತೀರ್ಮಾನಕ್ಕೆ ಬರಲಾಯಿತು.
ಸಭೆಯಲ್ಲಿ ಸಂಘಟನೆಯ ಜಿಲ್ಲಾ ಘಕಟದ ಉಪಾಧ್ಯಕ್ಷ ಶೇಖರ್ ಕೂಳೂರು, ಕಳಸ ಘಟಕದ ಕಾರ್ಯದರ್ಶಿ ಅರುಣ್ ಹಿನಾರಿ, ಉಪಾಧ್ಯಕ್ಷೆ ಪ್ರೇಮಾ, ಕೊಪ್ಪ ಘಟಕದ ಉಪಾಧ್ಯಕ್ಷ ನಟರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.