ಮೂಡಿಗೆರೆ: ಶಾಲೆಯಲ್ಲಿ ಮಕ್ಕಳ ಎದುರು ದಿನನಿತ್ಯ ಜಗಳವಾಡಿಕೊಂಡು, ಪಾಠ ಮಾಡದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವ ಕಿರುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸಿ ಗ್ರಾ.ಪಂ. ಕಚೇರಿ ಎದುರು ಗ್ರಾಮಸ್ಥರು ಮತ್ತು ಎಸ್ಡಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ದೂರಿನ ಮೇರೆಗೆ ಆ. 28ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಅವರು ಶಾಲೆಗೆ ಭೇಟಿ ನೀಡಿ ಶಿಕ್ಷಕಿಯರ ವಿರುದ್ಧ ಡಿಡಿಪಿಐ ಅವರಿಗೆ ವರದಿ ಸಲ್ಲಿಸಿದ್ದರು. ಆದರೆ, ಇದುವರೆಗೂ ಅಧಿಕಾರಿಗಳು ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಹರಿಭಾರ್ಗವ ಮಾತನಾಡಿ, ‘ಶಿಕ್ಷಕಿಯರು ಮಕ್ಕಳ ಎದುರು ನಿರಂತರವಾಗಿ ಜಗಳ ಮಾಡಿಕೊಳ್ಳುತ್ತಾರೆ. ಈ ಹಿಂದೆ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಶಿಕ್ಷಕಿಯರ ಜಗಳಿಂದ ಗ್ರಾಮಸ್ಥರು ಬೇರೆ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದ್ದಾರೆ. ಈಗ ಶಾಲೆಯಲ್ಲಿ 34 ಮಕ್ಕಳು ಮಾತ್ರ ಉಳಿದಿದ್ದಾರೆ’ ಎಂದರು.
ಗ್ರಾಮಸ್ಥ ಕೆ.ಆರ್.ಲೋಕೇಶ್ ಮಾತನಾಡಿ, ‘ಶಿಕ್ಷಕಿಯರ ವಿರುದ್ಧ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು, ಬೇರೆ ಶಿಕ್ಷಕರನ್ನು ಈ ಶಾಲೆಗೆ ನಿಯೋಜಿಸಬೇಕು’ ಎಂದು ಒತ್ತಾಯಿಸಿದರು.
ಗ್ರಾ.ಪಂ. ಅಧ್ಯಕ್ಷೆ ಸ್ವಾತಿಶ್ರೀ, ಸದಸ್ಯ ಕೆ.ಆರ್.ದಿನೇಶ್, ಎಸ್ಡಿಎಂಸಿ ಉಪಾಧ್ಯಕ್ಷೆ ಕಾವ್ಯಾ, ಸದಸ್ಯರಾದ ರಂಜಿನಿ, ರಮೇಶ್, ಶಿವರಾಜ್, ಹರೀಶ್, ಗೋಪಾಲ, ಮಧು, ನಾಗೇಶ್, ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಎಂ.ಆರ್.ನಜೀರ್, ಯು.ಎಚ್.ರಾಜಶೇಖರ್, ಬಿ.ಕೆ.ಚಂದ್ರಶೇಖರ್, ಮಾಜಿ ಮಂಡಲ ಪಂಚಾಯಿತಿ ಸದಸ್ಯ ಕೆ.ಕೆ.ರಾಮಯ್ಯ, ಗ್ರಾಮಸ್ಥರಾದ ಚನ್ನಕೇಶವ ರವಿಕುಮಾರ್ ಪರಮೇಶ ಮತ್ತಿತರರು ಇದ್ದರು.
ಕಿರುಗುಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರು ನಿರಂತರವಾಗಿ ಜಗಳವಾಡುತ್ತಿರುವುದರಿಂದ ದಾಖಲಾತಿ ಕಡಿಮೆಯಾಗಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತವಾಗಿದೆ. ಡಿಡಿಪಿಐ ಸೂಚನೆ ಮೇರೆಗೆ ಶಾಲೆಗೆ ಭೇಟಿ ನೀಡಿ, ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ. ಶಿಕ್ಷಕರ ದಿನಾಚರಣೆ ಮತ್ತು ಗಣೇಶ ಹಬ್ಬ ಇದ್ದಿದ್ದರಿಂದ ಕ್ರಮ ಕೈಗೊಳ್ಳುವುದು ತಡವಾಗಿದೆ. ಮಂಗಳವಾರ ಶಾಲೆಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಲಿದ್ದಾರೆ’ ಎಂದು ಮೂಡಿಗೆರೆ ಬಿಇಒ ಹೇಮಂತ್ ಚಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.