ADVERTISEMENT

ಮಲೆನಾಡಿನ ವಿವಿಧೆಡೆ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 8:49 IST
Last Updated 5 ಜುಲೈ 2020, 8:49 IST
ಕಳಸದಲ್ಲಿ ಶನಿವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು.
ಕಳಸದಲ್ಲಿ ಶನಿವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು.   

ಕಳಸ: ಪಟ್ಟಣದಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದೆ.

ಮಧ್ಯಾಹ್ನ 3ರಿಂದ ಆರಂಭವಾದ ಮಳೆ 4 ಗಂಟೆಯವರೆಗೂ ಸತತವಾಗಿ ಸುರಿದು ಒಂದು ಇಂಚಿಗೂ ಹೆಚ್ಚು ಪ್ರಮಾಣ ದಾಖಲಿಸಿದೆ. ಈ ಮಳೆಯು ಮಳೆಗಾಲದ ಎಲ್ಲ ಲಕ್ಷಣಗಳೊಂದಿಗೆ ಶೀತದ ವಾತಾವರಣ ಮೂಡಿಸಿದೆ.

ಕಾಡಿನಲ್ಲಿ, ಕಾಫಿ ತೋಟದಲ್ಲಿ ಬೀರಲಕ್ಕಿ ಹುಳದ ಸತತ ಚೀರಾಟ ಮಳೆಕಾಡಿನ ವಿಶಿಷ್ಟತೆ ಹೆಚ್ಚಿಸಿದೆ. ಭತ್ತದ ಕೃಷಿಗೆ ಪೂರಕವಾದ ಈ ಮಳೆಯಲ್ಲಿ ಭೂಮಿ ಹದ ಮಾಡಿ ಅಗಡಿ ಸಿದ್ಧಪಡಿಸುವ ಕೆಲಸ ಆರಂಭಗೊಳ್ಳುತ್ತಿದೆ. ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಏರಿದ್ದು ನಿಧಾನಕ್ಕೆ ಮೈದುಂಬುತ್ತಿದೆ.

ADVERTISEMENT

ಕೊಪ್ಪ: ಉತ್ತಮ ಮಳೆ

ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.

ತಾಲ್ಲೂಕಿನಲ್ಲಿ ವಿವಿಧೆಡೆ ಶುಕ್ರವಾರ ರಾತ್ರಿ ಮಳೆ ಸುರಿದಿತ್ತು. ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಆಗಾಗ ಬಿಡುವ ನೀಡಿ ಮತ್ತೆ ಸುರಿಯಿತು. ಮಧ್ಯಾಹ್ನದ ನಂತರ ಹಲವೆಡೆ ಬಿರುಸು ಮಳೆಯಾಗಿದ್ದು, ಸಂಜೆ ಹೊತ್ತಿಗೆ ಕೊಂಚ ಬಿಡುವು ನೀಡಿತ್ತು.

ರಸ್ತೆಗೆ ಬಿದ್ದ ಮರ

ಮೆಣಸಿನಹಾಡ್ಯ (ಬಾಳೆಹೊನ್ನೂರು): ಶುಕ್ರವಾರ ರಾತ್ರಿ ಬಾಳೆಹೊನ್ನೂರು, ಜಯಪುರ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಕೊಪ್ಪ ತಾಲ್ಲೂಕಿನ ಕಲ್ಲುಗುಡ್ಡೆ ಗ್ರಾಮದ ಸಾತ್ ಕೊಡಿಗೆ ನೆಲ್ಲಿಹಡ್ಲು ಮಧ್ಯ ಭಾಗದಲ್ಲಿ ರಸ್ತೆಗೆ ಮರಬಿದ್ದು, ಹೊರನಾಡು– ಕೊಗ್ರೆ ರಸ್ತೆ ಸಂಪರ್ಕ ಬೆಳಿಗ್ಗೆ ಕಡಿತಗೊಂಡಿತ್ತು. ಮರ ಬಿದ್ದ ಜಾಗದಿಂದ ಕೆಲವೇ ಅಡಿಗಳ ದೂರದಲ್ಲಿ ಸಣ್ಣಮ್ಮ ರಾಮೇಗೌಡರ ಮನೆಯಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.