ADVERTISEMENT

ಶೃಂಗೇರಿ ಶಾರದೆಗೆ ರಾಜರಾಜೇಶ್ವರಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 14:18 IST
Last Updated 10 ಅಕ್ಟೋಬರ್ 2024, 14:18 IST
ಶೃಂಗೇರಿ ಶಾರದಾ ಮಠದಲ್ಲಿ ಶರನ್ನವರಾತ್ರಿಯಲ್ಲಿ ನೂತನ ಅಕ್ಷರ ಅಭ್ಯಾಸ ಮಂಟಪವನ್ನು ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಯವರು ಉದ್ಘಾಟಿಸಿದರು
ಶೃಂಗೇರಿ ಶಾರದಾ ಮಠದಲ್ಲಿ ಶರನ್ನವರಾತ್ರಿಯಲ್ಲಿ ನೂತನ ಅಕ್ಷರ ಅಭ್ಯಾಸ ಮಂಟಪವನ್ನು ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಯವರು ಉದ್ಘಾಟಿಸಿದರು   

ಶೃಂಗೇರಿ: ಶರನ್ನವರಾತ್ರಿಯ ಪ್ರಯುಕ್ತ ಶಾರದಾ ಮಠದಲ್ಲಿ ಗುರುವಾರ ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು.

ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ  ಸ್ವಾಮೀಜಿ ಅವರಿಂದ ಶಾರದಾಂಬೆಗೆ ವಿಶೇಷಪೂಜೆ, ಪಾರಾಯಣಗಳು, ಜಪಗಳು ನಡೆದವು.

ಸಂಜೆ ಚಂದ್ರಶೇಖರಭಾರತಿ ಸಭಾಂಗಣದಲ್ಲಿ ಬೆಂಗಳೂರಿನ ಜ್ಞಾನೋದಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.

ADVERTISEMENT

ಶಾರದಾ ಮಠದಲ್ಲಿ ಸಂಜೆ 6 ಗಂಟೆಗೆ ನಡೆದ ಬೀದಿ ಉತ್ಸವದಲ್ಲಿ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಭಾಗವಹಿಸಿದರು. ಬಿದರಗೋಡು ರಾಮದೇವಸ್ಥಾನ, ಬೇಗಾರು ಗಣಪತಿ ಅಂಜನೇಯ ದೇವಸ್ಥಾನ, ಕೋಟೆ ಸೋಮೇಶ್ವರ ದೇವಾಲಯ, ಹರಾವರಿ ಮತ್ತು ಹಗ್ಗುರಡಿ ಮಲ್ಲಿಕಾರ್ಜುನ ದೇವಸ್ಥಾನ, ಅಸನಬಾಳು ಗುತ್ಯಮ್ಮ ದೇವಾಲಯಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಕುಲಾಲ ಸಂಘ ಮತ್ತು ಮೊಗವೀರ ಸಮಾಜ, ರಾಜ್ಯ ಸರ್ಕಾರ ನೌಕರರ ಸಂಘ, ನಿವೃತ್ತ ನೌಕರರ ಸಂಘ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳ ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು  ಭಾಗವಹಿಸಿದ್ದರು.

ದರ್ಬಾರು: ವಿಧುಶೇಖರಭಾರತಿ ಸ್ವಾಮೀಜಿ ಶಾರದಾ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ಸ್ವಾಮೀಯ ಪ್ರಾಂಗಣದಲ್ಲಿ ಶಾರದಾಮ್ಮನವರ ದೇವಾಲಯದ ಒಳಗೆ ಉತ್ಸವದಲ್ಲಿ ಭಾಗವಹಿಸಿದರು. ಬಂಗಾರದ ರಥದಲ್ಲಿರುವ ಸಿಂಹಾಸನದಲ್ಲಿ ಶಾರದೆಯ ಉತ್ಸವ ಮೂರ್ತಿಯನ್ನು ಇಡಲಾಯಿತು. ವೇದ, ವಾದ್ಯ ಫೋಷಗಳೊಂದಿಗೆ, ಛತ್ರಿ-ಛಾಮರಗಳೊಂದಿಗೆ ಒಳ ಪ್ರಾಂಗಣದಲ್ಲಿ ದೇವಾಲಯಕ್ಕೆ ಮೂರು ಸುತ್ತು ಉತ್ಸವ ನಡೆಯಿತು. ಉತ್ಸವದ ಬಳಿಕ ಗುರುಗಳು ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಆಸೀನರಾದರು. ಸಪ್ತಶತಿ ಪಾರಾಯಣದ ಅಧ್ಯಯನ, ಅಮ್ಮನವರಿಗೆ ಮಂಗಳಾರತಿ, ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರ ನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.