ADVERTISEMENT

ನಂಬಿಕೆಯ ಫಲ ಅದ್ಭುತವಾದುದು: ಶ್ರಾವಣ ಪೂಜಾನುಷ್ಠಾನದಲ್ಲಿ ರಂಭಾಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 2:36 IST
Last Updated 23 ಆಗಸ್ಟ್ 2022, 2:36 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಪೂಜಾನುಷ್ಠಾನ ಮತ್ತು ಪುರಾಣ ಪ್ರವಚನ ಧರ್ಮ ಸಮಾರಂಭದಲ್ಲಿ ಡಾ.ಗುರುಪಾದಯ್ಯ ಸಾಲಿಮಠ ಅವರು ಸಂಗ್ರಹಿಸಿದ ‘ಭಾವ ತರಂಗ’ ಸಾಹಿತ್ಯ ಕೃತಿಯನ್ನು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಪೂಜಾನುಷ್ಠಾನ ಮತ್ತು ಪುರಾಣ ಪ್ರವಚನ ಧರ್ಮ ಸಮಾರಂಭದಲ್ಲಿ ಡಾ.ಗುರುಪಾದಯ್ಯ ಸಾಲಿಮಠ ಅವರು ಸಂಗ್ರಹಿಸಿದ ‘ಭಾವ ತರಂಗ’ ಸಾಹಿತ್ಯ ಕೃತಿಯನ್ನು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು.   

ರಂಭಾಪುರಿ ಪೀಠ (ಬಾಳೆಹೊನ್ನೂರು): ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದೆ ಇದ್ದರೂ ಅವುಗಳಿಂದ ಸಿಗುವ ಫಲ ಅದ್ಭುತವಾದುದು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ರಂಭಾಪುರಿ ಪೀಠದಲ್ಲಿ ಸೋಮವಾರ ಶ್ರಾವಣ ಪೂಜಾನುಷ್ಠಾನ ಮತ್ತು ಪುರಾಣ ಪ್ರವಚನ ಧರ್ಮ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಅರಿತು ಆಚರಿಸಿ ಬಾಳಿದರೆ ಜೀವನ ಸುಖಮಯ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಐಶ್ವರ್ಯದ ಅಡಿಪಾಯ ಎಲ್ಲಿದೆ ಎಂದು ಹುಡುಕುವುದರ ಬದಲಾಗಿ ಅದು ದುಡಿಮೆಯಲ್ಲಿದೆ ಎಂದು ತಿಳಿಯಬೇಕಾಗುತ್ತದೆ. ದೇಹ ಶುದ್ಧಿ, ನುಡಿ ಶುದ್ಧಿ ಮತ್ತು ಮನಃಶುದ್ಧಿ ಇವುಗಳನ್ನು ಸಾಧಿಸಲು ನೆರವಾಗುವುದೇ ನಿಜವಾದ ಧರ್ಮವಾಗಿದೆ’ ಎಂದರು.

ADVERTISEMENT

‘ಸಾರ್ಥಕವಾದ ದುಡಿಮೆಯಿಂದ ಸಿಗುವ ನೆಮ್ಮದಿ ಜೀವನದಲ್ಲಿ ದೊರಕುವ ಶ್ರೇಷ್ಠವಾದ ಸಂಜೀವಿನಿಯಾಗಿದೆ. ಅಧರ್ಮದಿಂದ ಮನುಷ್ಯ ತಾತ್ಕಾಲಿಕ ವಾಗಿ ಮೇಲೇರಿದರೂ ಅಂತಿಮವಾಗಿ ಬುಡ ಸಹಿತ ನಾಶಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು.

ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಅವರು ಸಂಗ್ರಹಿಸಿದ ‘ಭಾವ ತರಂಗ’ ಸಾಹಿತ್ಯ ಕೃತಿಯನ್ನು ರಂಭಾಪುರಿ ಸ್ವಾಮೀಜಿ ಬಿಡುಗಡೆ ಮಾಡಿದರು. ವೀರಣ್ಣ ಸಂಶಿ ಮತ್ತು ಕಬನೂರು- ಬೊಮ್ಮನಹಳ್ಳಿ ಭಕ್ತರು ಅನ್ನ ದಾಸೋಹ ನೆರವೇರಿಸಿದರು.

ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಗಂವ್ಹಾರ ಹಿರೇಮಠದ ವಿರೂಪಾಕ್ಷೇಶ್ವರ ಸ್ವಾಮೀಜಿ, ಗಂಗಾಧರ, ಬಸಯ್ಯ, ಪ್ರಭಾರ ಮುಖ್ಯಶಿಕ್ಷಕ ವೀರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.