ಅಜ್ಜಂಪುರ: ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ಅಂತರದಲ್ಲಿರುವ ಬಗ್ಗವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ‘ಕುರುಬರಹಳ್ಳಿ’ ಸಂಪರ್ಕ ರಸ್ತೆ ತೀವ್ರ ಹದಗೆಟ್ಟಿದೆ.
ಕುರುಬರಹಳ್ಳಿ ಸಂಪರ್ಕಿಸುವ ಚನ್ನಾಪುರ- ಕುರುಬರಹಳ್ಳಿ ರಸ್ತೆ ಮತ್ತು ಬಗ್ಗವಳ್ಳಿ ಬೀರೂರು ಮುಖ್ಯ ರಸ್ತೆಯಿಂದ ಕುರುಬರಹಳ್ಳಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಜನರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.
ಸಂಪರ್ಕ ರಸ್ತೆಯ ಡಾಂಬರು ಕಿತ್ತು ಹೋಗಿದೆ. ಜಲ್ಲಿಕಲ್ಲು ಹೊರಬಂದಿವೆ. ರಸ್ತೆಯುದ್ದಕ್ಕೂ ಆಳ ಗುಂಡಿ ನಿರ್ಮಾಣ ಗೊಂಡಿದ್ದು, ವಾಹನಗಳ ಸಂಚಾರಕ್ಕೆ ತೊಡಕಾಗಿದೆ.
‘ಮಳೆಗಾಲದಲ್ಲಿ ರಸ್ತೆ ಗುಂಡಿ ಗಳಲ್ಲಿ ನೀರು ತುಂಬುತ್ತದೆ. ಕೆಸರಿನ ರಾಡಿ ಸೃಷ್ಟಿಯಾಗುತ್ತದೆ. ಕಾಲಿಟ್ಟರೂ, ಊತುಕೊಳ್ಳುತ್ತದೆ. ಬಟ್ಟೆ ಕೊಳೆಯಾಗುತ್ತದೆ. ಜಡಿ ಮಳೆ ಇದ್ದಾಗ ಶಾಲೆಗೆ ಹೋಗುವುದಿಲ್ಲ’ ಎನ್ನುತ್ತಾಳೆ 9ನೇ ತರಗತಿ ವಿದ್ಯಾರ್ಥಿನಿ ಸವಿತಾ.
‘5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಮುಂದಿನ ಹಂತದ ಕಲಿಕೆಗೆ ಚನ್ನಾಪುರ ಇಲ್ಲವೇ ಬಗ್ಗವಳ್ಳಿ ಅಥವಾ ಅಜ್ಜಂಪುರಕ್ಕೆ ಹೋಗಬೇಕಿದೆ. ಪಡಿತರ ಪಡೆಯಲು ಬಗ್ಗವಳ್ಳಿಗೆ, ಚಿಕಿತ್ಸೆಗೆ ಅಜ್ಜಂಪುರ, ಬೀರೂರು, ತರೀಕೆರೆಗೆ ಹೋಗಬೇಕಿದೆ. ಆದರೆ, ಹದಗೆಟ್ಟ ಸಂಪರ್ಕ ರಸ್ತೆಯಿಂದಾಗಿ ಬಾಡಿಗೆ ವಾಹನದವರು ಗ್ರಾಮಕ್ಕೆ ಬರಲು ಹಿಂಜರಿಯುತ್ತಾರೆ. ಕೆಲವೊಮ್ಮೆ ಕಾಯಿಲೆಯಿದ್ದರೂ ನಡೆದೆ ಮುಖ್ಯ ರಸ್ತೆ ತಲುಪುವ ಅನಿವಾರ್ಯತೆ ಇದೆ’ ಎನ್ನುತ್ತಾರೆ ನಿವಾಸಿ ಶಿವು.
‘ಗ್ರಾಮದಲ್ಲಿ 60-70ರಷ್ಟು ಮನೆ ಗಳಿವೆ. 260-280 ಜನಸಂಖ್ಯೆಯಿದೆ. 150ಕ್ಕೂ ಅಧಿಕ ಮತದಾರರಿದ್ದಾರೆ. ಆದರೂ ಜನಪ್ರತಿನಿಧಿಗಳು ಮತ್ತು ಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸಿದ್ದಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು. ಸಂಪರ್ಕ ರಸ್ತೆ ನಿರ್ಮಿಸಬೇಕು. ವಾಹನ ಹಾಗೂ ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಒತ್ತಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.