ಕೊಪ್ಪ: ‘ಭಾರತ ಎಂದರೆ ಅದು ಹಿಂದೂ ಎಂದರ್ಥ. ಈ ನೆಲದ ಬಗ್ಗೆ ಮಾತೃ ಭಾವದಿಂದ ವರ್ತಿಸುವವರು ಎಲ್ಲರೂ ಹಿಂದೂಗಳು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಡಾ.ಪ್ರಭಾಕರ ಭಟ್ ತಿಳಿಸಿದರು.
ತಾಲ್ಲೂಕಿನ ಚಿತ್ರಕೂಟ ಪ್ರಬೋಧಿನಿ ಗುರುಕುಲದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಧವ ಶಾಖೆಯ ಶಾಖಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, ‘ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು, ಕ್ರಿಕೆಟ್ನಲ್ಲಿ ಪಾಕ್ ವಿರುದ್ಧ ಭಾರತ ಸೋತಾಗ ಸಂಭ್ರಮಿಸುವವರು ಈ ದೇಶದ ಮಕ್ಕಳಾಗಲು ಸಾಧ್ಯವಿಲ್ಲ’ ಎಂದರು.
‘ಇಸ್ಲಾಂನ ಅಲ್ಲಾಹ್, ಕ್ರೈಸ್ತರ ಯೇಸುವಿನ ಹೆಸರಲ್ಲಿ ನಡೆದ ನರಮೇಧ ಜಗತ್ತಿನ ಇತಿಹಾಸದಲ್ಲಿ ದಾಖಲಾಗಿದೆ. ಹಾಗೆಯೇ ಬೌದ್ಧ, ಪಾರಸಿ, ಯಹೂದಿ, ಜೊರಾಷ್ಟ್ರಿಯನ್ರನ್ನು ತಬ್ಬಿಕೊಂಡು ಆಶ್ರಯ ನೀಡಿದ ಸಂಸ್ಕೃತಿ ನಮ್ಮದು. ಮತಾಂತರ ಎಂದರೆ ರಾಷ್ಟ್ರಾಂತರ ಆಗುತ್ತದೆ. ಮಾಧವ ಮಹಮ್ಮದ್ ಆದರೆ, ಲೀಲಾ ಲಿಲ್ಲಿ ಆದರೆ, ದಿನೇಶ್ ಡೆನ್ನಿಸ್ ಆದರೆ ಸಂಸ್ಕೃತಿ ಉಳಿಯುವುದಿಲ್ಲ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಯಲಕ್ಷ್ಮಿ ಸಮೂಹ ಸಂಸ್ಥೆಯ ದಯಾನಂದ್ ಮಾತನಾಡಿ, ‘ಗುರುಕುಲ ಹಾಗೂ ಜಯಲಕ್ಷ್ಮಿ ಸಮೂಹ ಸಂಸ್ಥೆಗಳ ಸಂಬಂಧ ದಶಕಗಳ ಹಿಂದಿನದ್ದು. ಇಲ್ಲಿನ ವಿಶಿಷ್ಟ ಶಿಕ್ಷಣ ಪದ್ಧತಿ ಹಲವು ಶಿಕ್ಷಣ ತಜ್ಞರ ಕುತೂಹಲ ಕೆರಳಿಸುವ ವಿಷಯವಾಗಿದೆ. ಇಲ್ಲಿ ಪರಂಪರಾನುಗತ ಶಾಸ್ತ್ರೀಯ ಶಿಕ್ಷಣದೊಂದಿಗೆ ಶಾರೀರಿಕ ಪ್ರಧಾನವಾದ ಶಿಕ್ಷಣವನ್ನೂ ನಿಡಲಾಗುತ್ತಿದೆ’ ಎಂದರು.
ಪ್ರಬೋಧಿನಿ ಟ್ರಸ್ಟ್ ನಿರ್ವಾಹಕ ವಿಶ್ವಸ್ತ ಎಚ್.ಬಿ.ರಾಜಗೋಪಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.