ADVERTISEMENT

ಎಸ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ

ಹಳ್ಳದಲ್ಲಿ ಕೊಚ್ಚಿ ಹೋಗಿರುವ ಬಾಲಕಿ; ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 5:02 IST
Last Updated 7 ಜುಲೈ 2022, 5:02 IST
ಚಿಕ್ಕಮಗಳೂರು ತಾಲ್ಲೂಕಿನ ತೊಗರಿಹಂಕಲ್‌ ಬಳಿ ಕಾಫಿ ತೋಟದ ಹಳ್ಳದಲ್ಲಿ ಬುಧವಾರ ಎನ್‌ಡಿಆರ್‌ಎಫ್‌ ತಂಡದವರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಚಿಕ್ಕಮಗಳೂರು ತಾಲ್ಲೂಕಿನ ತೊಗರಿಹಂಕಲ್‌ ಬಳಿ ಕಾಫಿ ತೋಟದ ಹಳ್ಳದಲ್ಲಿ ಬುಧವಾರ ಎನ್‌ಡಿಆರ್‌ಎಫ್‌ ತಂಡದವರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು.   

ಚಿಕ್ಕಮಗಳೂರು: ತಾಲ್ಲೂಕಿನ ತೊಗರಿಹಂಕಲ್‌ ಬಳಿಯ ಕಾಫಿ ತೋಟದಲ್ಲಿ ಕೊಚ್ಚಿ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ ಶೋಧ ಮುಂದುವರಿದಿದ್ದು, ಬುಧವಾರ ಎಸ್‌ಡಿಆರ್‌ಎಫ್‌ (ರಾಜ್ಯ ವಿಪತ್ತು ಸ್ಪಂದನಾ ತಂಡ) ತಂಡವೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

ಶಾಲೆಯಿಂದ ಸೋಮವಾರ ಸಂಜೆ ಮನೆಗೆ ವಾಪಾಸಾಗುವಾಗ ವಿದ್ಯಾರ್ಥಿನಿ ಹಳ್ಳದ ಪಾಲಾಗಿದ್ದು, ಈವರೆಗೆ ಪತ್ತೆಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ, ಈಜುಗಾರರು, ಸ್ಥಳೀಯರು ಸತತವಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹಳ್ಳದ ಉದ್ದಗಲಕ್ಕೂ ಇಕ್ಕೆಲಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಅಗ್ನಿ ಶಾಮಕ ಸಿಬ್ಬಂದಿ 25 ಮಂದಿ, ಎಸ್‌ಡಿಆರ್‌ಎಫ್‌ನ 25 ಮಂದಿ, ಸ್ಥಳೀಯರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸತತವಾಗಿ ಮಳೆಯಾಗುತ್ತಿದೆ. ವರ್ಷಧಾರೆಯಲ್ಲೇ ಹುಡುಕಾಟ ನಡೆಯುತ್ತಿದೆ.

ADVERTISEMENT

‘ಬಾಲಕಿ ಪತ್ತೆಗೆ ಶತಾಯಗತಾಯ ಪ್ರಯತ್ನ’

ಅಗ್ನಿಶಾಮಕ ಅಧಿಕಾರಿ ಕೆ.ಪಿ.ಶಶಿಧರ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಳ್ಳ ರಭಸವಾಗಿ ಹರಿಯುತ್ತಿದೆ. ಸತತವಾಗಿ ಮಳೆಯಾಗುತ್ತಿದ್ದು ಗಂಟೆ ಗಂಟೆಗೆ ನೀರಿನ ವೇಗ, ಮಟ್ಟ ಹೆಚ್ಚಾಗುತ್ತಿದೆ. ಮಂಗಳೂರಿನ ಸ್ಕೂಬಾ ಡೈವಿಂಗ್‌ ಪಟುವೊಬ್ಬರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬಾಲಕಿ ಪತ್ತೆಗೆ ಶತಾಯಗತಾಯ ‌ಪ್ರಯತ್ನದಲ್ಲಿ ತೊಡಗಿದ್ದೇವೆ’ ಎಂದು ತಿಳಿಸಿದರು.
‘ಪುತ್ರಿ ಬಹಳ ಚೂಟಿ ಇದ್ದಳು. ಅವಳು ಹಳ್ಳದ ಪಾಲಾದಾಗಿನಿಂದ ದಿಕ್ಕು ತೋಚದಂತಾಗಿದೆ. ತಂಡಗಳು ಹುಡುಕಾಟದಲ್ಲಿ ತೊಡಗಿವೆ. ಪತ್ತೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ’ ಎಂದು ಸುಪ್ರಿತಾ ಸಾಕು ತಂದೆ ಆ್ಯಂಡ್ರೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.