ADVERTISEMENT

ಮಳೆ ನಷ್ಟದ ಅಂದಾಜಿಗೆ ಸಮಯ ಬೇಕು: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 5:32 IST
Last Updated 13 ಜುಲೈ 2022, 5:32 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಬಾಳೆಹೊನ್ನೂರು: ಮಳೆ ನಿರಂತರವಾಗಿ ಸುರಿಯುತ್ತಿದ್ದು ಹಾನಿಯ ಪ್ರಮಾಣ ಏರಿಕೆಯಾಗುತ್ತಿದೆ. ನಷ್ಟದ ಅಂದಾಜಿಗೆ ಸಮಯ ಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮನೆ, ಸೇತುವೆ, ರಸ್ತೆ, ಶಾಲಾ ಕಾಲೇಜು ಕಟ್ಟಡ, ತೋಟ, ಗದ್ದೆಗಳಿಗೆ ಹಾನಿಯಾದ ಕುರಿತು ಸಮಗ್ರ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ತಹಶೀಲ್ದಾರ್ ಕಂದಾಯ ನಿರೀಕ್ಷಕರು ಕಡ್ಡಾಯವಾಗಿ ಕರ್ತವ್ಯದ ಸ್ಥಳದಲ್ಲಿದ್ದು ಜನರ ನೋವಿಗೆ ಸ್ಪಂದಸುವಂತೆ ಸೂಚಿಸಲಾಗಿದೆ.


ಕಳೆದ ಬಾರಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶದಲ್ಲಿ ಕಾಮಗಾರಿ ನಡೆಸದೆ, ರಾಜಕೀಯವಾಗಿ ಒಂದು ಗುಂಪಿಗೆ ಸೇರಿದ ಕಡೆಗಳಲ್ಲಿ ಮಾತ್ರ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಬಾರಿ ನಡೆದ ತಪ್ಪು ಈ ‌ಬಾರಿ ಮರುಕಳಿಸಬಾರದು. ಇದನ್ನು ಜಿಲ್ಲಾಧಿಕಾರಿ ಗಮನ ಸೆಳೆಯಲಾಗಿದೆ. ಪಕ್ಷ ರಾಜಕಾರಣ ಚುನಾವಣಾ ಸಂದರ್ಭದಲ್ಲಿ ಮಾತ್ರ ಮಾಡೋಣ, ಉಳಿದಂತೆ ಎಲ್ಲಾ ಸಾರ್ವಜನಿಕರ ಸಲುವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಅಡಿಕೆ ಹಳದಿ ಎಲೆ ರೋಗಕ್ಕೆ ನೀಡಿದ ಗೋರಖ್ ಸಿಂಗ್ ವರದಿ ಸರ್ಕಾರದ ಕೈತಪ್ಪಿ ಸುಪ್ರೀಂ ಕೋರ್ಟ್‌ನಲ್ಲಿದೆ. ಕೇವಲ ವರದಿಯನ್ನು ಪರಿಗಣಿಸಿದಲ್ಲಿ ಎಲ್ಲ ಅಂಶಗಳನ್ನೂ ಒಪ್ಪಿಕೊಳ್ಳಬೇಕಿದೆ. ಅದರಲ್ಲಿರುವ ಒಂದು ಅಂಶವನ್ನು ಮಾತ್ರ ಒಪ್ಪಿಕೊಳ್ಳಲು ಅವಕಾಶವಿಲ್ಲ. ರಸಗೊಬ್ಬರ ಹಾಕಬಾರದು ಎಂಬ ಅಂಶ ವರದಿಯುಲ್ಲಿದೆ. ಇದು ನ್ಯಾಯ ಸಮ್ಮತವಲ್ಲ. ಈ ಬಗ್ಗೆ ವಾದ ಮಂಡಿಸಲು ಪ್ರಧಾನ ಮಂತ್ರಿ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರನ್ನು ನೇಮಿಸುವ ಮೂಲಕ ವಿಶೇಷ ಒತ್ತು ನೀಡಿದ್ದಾರೆ. ಗೋರಖ್ ಸಿಂಗ್ ವರದಿ, ಕಸ್ತೂರಿ ರಂಗನ್ ವರದಿ ಸುಪ್ರೀಂ ಕೋರ್ಟ್‌ ಮೇಟ್ಟಿಲೇರಲು ಕಾಂಗ್ರೆಸ್ ಕಾರಣ. ಅದು ಅವರ ಪಾಪದ ಕೂಸು ಎಂದರು.

ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆಯಲ್ಲಿ ಬೇರೆ ಬೇರೆ ಸಮಸ್ಯೆ ಇದೆ.ಡಿಸಿಸಿ ಬ್ಯಾಂಕ್ ಸಾಲ ನೀಡಲು ನಿರಾಕರಿಸಲು ವಿರೋಧ ಪಕ್ಷದ ನಾಯಕರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು ಕಾರಣ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.