ಶೃಂಗೇರಿ: ಶಾರದಾ ಮಠದಲ್ಲಿ ಶುಕ್ರವಾರ ಶಾರದಾ ದೇವಿಗೆ ಮೋಹಿನಿ ಅಲಂಕಾರ ಮಾಡಲಾಗಿತ್ತು. ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿ ಅವರು ಶಾರದಾಂಬೆಗೆ ವಿಶೇಷಪೂಜೆ ಸಲ್ಲಿಸಿದರು.
ಮಠದಲ್ಲಿ ನವರಾತ್ರಿ ಪ್ರಯುಕ್ತ ವೇದಗಳ ಪಾರಾಯಣ, ಮಾಧವೀಯ ಶಂಕರ ದಿಗ್ವಿಜಯ, ಸೂತ ಸಂಹಿತೆ, ಭುವನೇಶ್ವರಿ ಜಪ, ಕುಮಾರಿ ಹಾಗೂ ಸುವಾಸಿನಿಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಬೀದಿ ಉತ್ಸವ: ಶಾರದಾ ಮಠದಲ್ಲಿ ಸಂಜೆ ಬೀದಿ ಉತ್ಸವದಲ್ಲಿ ಧರೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಭಾಗವಹಿಸಿದರು. ಹೊಳೆಕೊಪ್ಪದ ರಾಮ ಸೇವಾ ಸಮಿತಿ ಹಾಗೂ ರಾಮ ಸ್ವಸಹಾಯ ಸಂಘ, ರಾಮ ಯುವ ರೈತ ಸಂಘ, ಮೇಲುಕೊಪ್ಪ ಮತ್ತು ಹಗಡೂರಿನ ಮಲ್ಲಿಕಾರ್ಜುನ ಸೇವಾ ಸಮಿತಿ, ಹೊಂಬಾಗಿನ ಬ್ರಹ್ಮಲಿಂಗೇಶ್ವರ ಸೇವಾ ಸಮಿತಿ, ತಾಲ್ಲೂಕಿನ ಮರಾಠಿ ಸೇವಾ ಸಂಘ, ಶೃಂಗೇರಿ, ಕೆಸರುಕುಡಿಗೆ, ಹಂಚರಿಕೆಯ ಜಾನಪದ ತಂಡಗಳು, ಧರೇಕೊಪ್ಪದ ಮಿತ್ರ ಯುವಕ ಸಂಘ, ಕಿಕ್ರೆಹೊಂಡ ಮತ್ತು ಮಾಕರ್ಸುವಿನ ಗೆಳೆಯ ಯುವಕ ಸಂಘ, ಶೃಂಗೇರಿಯ ವಿಶ್ವಕರ್ಮ ಸೇವಾ ಸಮಾಜ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು ಮತ್ತು ಎಲ್ಲಾ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ ಡಾ.ವೀಣಾರವಿಕುಮಾರ್ ಮತ್ತು ವೃಂದದಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು.
ಮಠದ ಸಂಪ್ರದಾಯದಂತೆ ವಿಧುಶೇಖರಭಾರತಿ ಸ್ವಾಮೀಜಿ ದರ್ಬಾರ್ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.