ADVERTISEMENT

ತರೀಕೆರೆ ಪುರಸಭೆ ಸಾಮಾನ್ಯ ಸಭೆ: ಅಂತರರಾಜ್ಯ ಪ್ರವಾಸಕ್ಕೆ ನಿರ್ಧರಿಸಿದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:25 IST
Last Updated 1 ಡಿಸೆಂಬರ್ 2022, 4:25 IST
ಪುರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಕಮಲ ರಾಜೇಂದ್ರ ವಹಿಸಿದ್ದರು.
ಪುರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಕಮಲ ರಾಜೇಂದ್ರ ವಹಿಸಿದ್ದರು.   

ತರೀಕೆರೆ: ಕುಡಿಯುವ ನೀರಿನ ಪೂರೈಕೆ ಹಾಗೂ ಸ್ವಚ್ಛತೆ ಕುರಿತು ಬುಧವಾರ ಇಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ಕುಡಿಯುವ ನೀರು ಪೂರೈಕೆ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ? ಸ್ವಚ್ಛತೆಯಲ್ಲಿ ಈ ಹಿಂದೆ ಎರಡನೇ ಸ್ಥಾನ ಗಳಿಸಿದ್ದ ಪಟ್ಟಣವು ಈ ಬಾರಿ 17ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಕಾರಣ ಏನು? ಎಂದು ಸದಸ್ಯ ಟಿ.ಎಂ.ಭೋಜರಾಜ್ ಪ್ರಶ್ನಿಸಿದರು.

ಪುನೀತ್ ಪುತ್ಥಳಿಯ ಸುತ್ತಮುತ್ತ ಉದ್ಯಾನ ನಿರ್ಮಿಸಬೇಕು ಎಂದುಸದಸ್ಯ ಲೋಕೇಶ್ ಒತ್ತಾಯಿಸಿದರು. ಸಾಮಾನ್ಯ ಸಭೆಯಲ್ಲಿ ತಿರ್ಮಾನಿಸಿ ಕ್ರಮ ಕೈಗೂಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷರು ಹೇಳಿದರು.

ADVERTISEMENT

18ನೇ ವಾರ್ಡ್‌ ಅನ್ನು ಕಸರಹಿತ ವಾರ್ಡ್‌ ಆಗಿ ಪರಿವರ್ತಿಸಲು ತಿರ್ಮಾನಿಸಲಾಗಿದೆ ಎಂದು ಮುಖ್ಯಾಧಿಕಾರಿ ಉತ್ತರಿಸಿದರು.

ಪುರಸಭೆಯಿಂದ ವಿವಿಧ ಇಲಾಖೆಗೆ ನಿಯೋಜಿಸಿದ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್‌ ಕರೆಯಿಸಿಕೊಳ್ಳಬೇಕು ಎಂದು ಸದಸ್ಯರಾದ ಅಶೋಕ ಆಚಾರ್, ದಾದಾಪೀರ್ ಒತ್ತಾಯಿಸಿದರು.

ಶವ ಸಾಗಿಸುವ ‘ಮುಕ್ತಿ ವಾಹಿನಿ’ ಕೆಟ್ಟು ಹೋಗಿದೆ. ಇದರಿಂದ ಬಡವರ ಶವ ಸಂಸ್ಕಾರಕ್ಕೆ ತೊಂದರೆಯಾಗಿದೆ. ಬೇಗ ದುರಸ್ತಿಪಡಿಸಿಕೊಡಿ ಎಂದು ಸದಸ್ಯೆ ದಿವ್ಯಾ ಒತ್ತಾಯಿಸಿದರು.

ವಾರ್ಡ್‌ 23ರಲ್ಲಿ ಕೊಳವೆ ಬಾವಿ ದುರಸ್ತಿ ಮಾಡಬೇಕು ಎಂದು ಸದಸ್ಯೆ ಪಾರ್ವತಮ್ಮ, ರಂಗಾಪುರ ಸರ್ವೆ 23ರ 11 ಎಕರೆ ಜಾಗದ ಸಂರಕ್ಷಣೆಗೆ ತಂತಿಬೇಲಿ ಅಳವಡಿಸಬೇಕು ಎಂದು ಸದಸ್ಯ ಬಸವರಾಜ ಒತ್ತಾಯಿಸಿದರು. ಈ ಜಾಗವನ್ನು ನಿವೇಶನವನ್ನಾಗಿ ಪರಿವರ್ತಿಸಿ, ಬಡವರಿಗೆ ಹಂಚಿಕೆ ಮಾಡಿ ಎಂದು ಭೋಜ ರಾಜ್ ಸಲಹೆ ನೀಡಿದರು. ಚರ್ಚೆಯಲ್ಲಿ ಗಿರಿಜಾ ವರ್ಮ ಪ್ರಕಾಶ, ಪರಮೇಶ ಪಾಲ್ಗೊಂಡರು.

ಸದಸ್ಯರ ಅಂತರರಾಜ್ಯ ಅಧ್ಯಯನ ಪ್ರವಾಸಕ್ಕಾಗಿ ವಿಶಾಖಪಟ್ಟಣಕ್ಕೆ ಹೋಗಲು ತಿರ್ಮಾನಿಸಲಾಯಿತು. ವಾರ್ಡ್‌ 2ರ ಗೋಕಟ್ಟೆಯಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಕೋಡಬೇಕು. ಮೂಲ ಸೌಲಭ್ಯ ಒದಗಿಸಬೇಕು ಎಂದು ಸದಸ್ಯ ಹಳಿಯೂರು ಕುಮಾರ್ ಒತ್ತಾಯಿಸಿದರು.

ಈ ಜಾಗವು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಸಮಸ್ಯೆಯಾಗಿದೆ. ಸಂಬಂಧ ಪಟ್ಟ ಅಧಿಕಾರಿ ಜೊತೆ ಪತ್ರದ ಮೂಲಕ ವ್ಯವಹರಿಸುದಾಗಿ ಮುಖ್ಯಾಧಿಕಾರಿ ತಿಳಿಸಿದರು. ಉಪಾಧ್ಯಕ್ಷೆ ರಿಹಾನ ಫರ್ವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.