
ತರೀಕೆರೆ: ತಿಂಥಿಣಿ ಬ್ರಿಡ್ಜ್ ಕನಕ ಗುರುಪೀಠ ಶಾಖಾ ಮಠದ ಶ್ರೀಸಿದ್ಧರಾಮಾನಂದಪುರಿ ಸ್ವಾಮೀಜಿ ದೈವಾಧೀನರಾದ ಹಿನ್ನೆಲೆ, ಶ್ರೀಗುರು ರೇವಣಸಿದ್ದೇಶ್ವರ ಕುರುಬರ ಸಮಾಜದ ವತಿಯಿಂದ ಪಟ್ಟಣದ ಶ್ರೀಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಗುರುವಾರ ನುಡಿನಮನ ಸಲ್ಲಿಸಲಾಯಿತು.
ಶ್ರೀಗುರು ರೇವಣಸಿದ್ದೇಶ್ವರ ಕುರುಬರ ಸಮಾಜದ ಅಧ್ಯಕ್ಷ ಟಿ.ಎಸ್. ರಮೇಶ್ ಮಾತನಾಡಿ, ‘ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ತಿಂಥಿಣಿ ಬ್ರಿಡ್ಜ್ ಶಾಖಾ ಮಠದ ಶ್ರೀಗಳು ದೈವಾಧೀನರಾಗಿರುವುದು ಅತೀವ ದುಃಖ ತಂದಿದೆ. ಕುರುಬ ಸಮುದಾಯ ರಾಜ್ಯದಲ್ಲಿ ಒಂದು ಶಕ್ತಿಯಾಗಿ ಹೊರಹೊಮ್ಮಲು ಗುರುಪೀಠಗಳೇ ಪ್ರಮುಖ ಕಾರಣ. ಸಮಾಜದ ಏಳಿಗೆಗೆ ಚಿಂತಿಸುವವರು, ಶ್ರಮಿಸುವವರು ತಿಂಥಿಣಿ ಪೀಠಕ್ಕೆ ಉತ್ತರಾಧಿಕಾರಿಗಳಾಗಲಿ’ ಎಂದು ತಿಳಿಸಿದರು.
ಪುರಸಭೆ ಸದಸ್ಯ ಟಿ.ಜಿ. ಶಶಾಂಕ್ ಮಾತನಾಡಿ, ಕಾಗಿನೆಲೆ ಮಹಾಸಂಸ್ಥಾನದ 4 ಶಾಖಾ ಮಠಗಳು, ಅಲ್ಲಿನ ಶ್ರೀಗಳು ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಶ್ರಮಿಸುತ್ತಿವೆ. ತಿಂಥಿಣಿ ಶ್ರೀಗಳು ಸಮಾಜದ ಏಳಿಗೆಯ ತುಡಿತ ಹೊಂದಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.