ನರಸಿಂಹರಾಜಪುರ: ಇಲ್ಲಿನ ಶರನ್ನವರಾತ್ರಿ ಸೇವಾ ಸಮಿತಿ ಆಶ್ರಯದಲ್ಲಿ 24ನೇ ವರ್ಷದ ಶರನ್ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಿರುವ ದೇವಿಯ ಮೂರ್ತಿಯು ವಿಸರ್ಜನೆಯ ದಿನವಾದ ಬುಧವಾರ ಭದ್ರಾಹಿನ್ನೀರಿನಲ್ಲಿ ತೆಪ್ಪೋತ್ಸವ ನಡೆಯಲಿದೆ.
ಮಂಗಳವಾರ ಆಯುಧಪೂಜೆಯ ಅಂಗವಾಗಿ ದೇವಿಗೆ ಚಾಮುಂಡೇಶ್ವರಿ (ದುರ್ಗಾ) ಅಲಂಕಾರ ಮಾಡಲಾಗುತ್ತದೆ. ಸಂಜೆ ಹಳೆಪೇಟೆ ಕನ್ನಡ ಯುವಕ ಸಂಘ, ಸುರಭಿಯುವಕ ಸಂಘ ಹಾಗೂ ರಾಮಕ್ಷತ್ರಿಯ ಯುವಕ ಸಂಘದ ಆಶ್ರಯಲ್ಲಿ ಪೂಜೆ ಆಯೋಜಿಸಲಾಗಿದೆ.
ಬುಧವಾರ ವಿಜಯದಶಮಿ ಅಂಗವಾಗಿ ದೇವಿಗೆ ಗಜವಾಹಿನಿ ಅಲಂಕಾರ ಮಾಡಲಾಗುತ್ತದೆ. ಮಧ್ಯಾಹ್ನ 12.30ಕ್ಕೆ ದೇವಿಯ ಮೂರ್ತಿ ವಿಸರ್ಜನೆ ನಡೆಯುತ್ತದೆ. ವಿಸರ್ಜನೆ ಅಂಗವಾಗಿ ಗ್ರಾಮ ದೇವತೆಗಳಾದ ಗುತ್ತ್ಯಮ್ಮ, ಅಂತರಘಟ್ಟಮ್ಮ ಹಾಗೂ ಕೊಟ್ಟೂರು ಬಸವೇಶ್ವರ ದೇವತೆಗಳೊಂದಿಗೆ ರಾಜಬೀದಿಯಲ್ಲಿ ಉತ್ಸವ ಮತ್ತು ಶಮೀಪೂಜೆ ಅಂಬು ಹೊಡೆಯುವುದು ಮತ್ತು ಬನ್ನಿ ಮುರಿಯುವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿಡಿಮದ್ದಿನ ಪ್ರದರ್ಶನ ನಂತರ ತೆಪ್ಪೋತ್ಸವದೊಂದಿಗೆ ಭದ್ರಾ ಹಿನ್ನೀರಿನಲ್ಲಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ.
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮೆಣಸೂರು ಗ್ರಾಮದ ಭದ್ರಾ ಹಿನ್ನೀರಿನಲ್ಲಿತೆಪ್ಪೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಅಲ್ಲದೆ ಭಗವಾಧ್ವಜ ಕಟ್ಟಲಾಗಿದೆ ಎಂದು ಶರನ್ನವರಾತ್ರಿ ಸೇವಾ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.